Wednesday, November 28, 2012

ಧರಣಿಯ ತಣಿಸುವ : 'ಶ್ರೇಷ್ಠ ಮದುಮಗಳು'

ಸಾಮಾನ್ಯವಾಗಿ ನಮ್ಮೆಲ್ಲರ 'ಕಲ್ಪನೆ'ಗಳು  ಕಾಲಕ್ರಮೇಣ ಮರೆಯಾಗುತ್ತವೆ  ಅಥವಾ  ಧೃಡ ನಂಬಿಕೆಯಾಗಿ ಪರಿವರ್ತನೆಗೊಳ್ಳುತ್ತವೆ.ಅಂತಹ ಕೆಲ ನಂಬಿಕೆಗಳು ಅಪ್ತವೆನಿಸಿಕೊಳ್ಳುತ್ತವೆ ವಾಸ್ತವವೆನಿಸತೊಡಗುತ್ತವೆ.ನನ್ನ ಅಂತದ್ದೊಂದು 'ಕಲ್ಪನೆಯಲ್ಲದ ನಂಬಿಕೆ,ವಾಸ್ತವವೆಂದು ನಂಬಿಕೊಂಡ  ಕಲ್ಪನೆ'ಯನ್ನು ಜನಪದ ಶೈಲಿಯ ಕವನಕ್ಕಿಳಿಸಲು ಪ್ರಯತ್ನಿಸಿದ್ದೇನೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


*ಶ್ರೇಷ್ಠ  ಮದುಮಗಳು *

ಮುಗಿಲೂರಿನ  ಮಗಳು
ಮನೆತುಂಬೋಕೆ ಹೊರಟಿಹಳು
ಗುಡುಗು  ಮಿಂಚಿನ 
ಹಿಮ್ಮೇಳದ  ಜೋಡಿ  
ಬೆಳೆಸಿಹಳು  
ರವಿ  ಚಂದ್ರರ  ಸಹೋದರಿ
ಇಳೆಯೆಡೆ  ತನ್ ಪಯಣ

ದೂರದೂರಿನ   ನಂಟು  
ದೂರ  ಮಾಡದಿರಲಿ  ಮನವ 
ಮುಗಿಯುವೆ  ಏನ್  ಕರವ
ಹರಸಿ ನೀಡಿರೆನಗೆ  ವಚನವ 
ಅಣ್ಣಂದಿರ,
ಚಿರಕಾಲ  ಕಾಯಲಿ  ನಿಮ್ಮನ್ನು
ನಮ್ಮನ್ನು   ಬೆಸೆದ 
ಬಂಧನದ  ಗಂಟು 

ಕೇಳು  ಮುದ್ದೂ ತಂಗಮ್ಮ
ಸವಿಂದಾಚೆಗೂ ಸಾವಿರ  ಕಾರ್ಯವಿರಲಿ,
ಹಗಲೊಡನೆ ರವಿ ಬರುವ...  
ಲಕ್ಷ  ಹೆಂಡಿರ  ಸಹವಾಸವಿರಲಿ,
ಅವರೊಡನೆಯೇ ನಾ ಬರುವೆ... 
ಅನುಗಾಲ ,  
ತವರಿನ  ಬಾಗಿಲಾಚೆಗೆ  ಬಗ್ಗಿ
ನಿನ್ನ  ಕಾಣೋಕೆ  ನಾವ್  ಬರುವೆವು  
ನಿನಗಿತ್ತ  ವಚನವ  ಉಳಿಸೇವು

ತಿಳಿ  ಕಪ್ಪು  ಅರಿವೇ  ತೊಟ್ಟು ,
ಗೆಳತಿಯರೆಲ್ಲಾ  ಒಂದೆಡೆ  ಸೇರಿರಲು ..
ತೇಲಿ  ಆಡಿದ  ದಿನಗಳ  ನೆನೆದು,  
ಬಾಚಿ  ತಬ್ಬಿ ಬೀಳ್ಕೊಡಲು
ಕಣ್ಣೀರ ನವ  ರೂಪ  ಧರಿಸಿದಳು ..
ಬಾನಂಗಳದಲಿ  ಮದುಮಗಳು
 

ಮುನ್ನಡೆಯಲು  ಗಾಳಿಯ  ಸಾರಥ್ಯದಲ್ಲಿ
ಗಗನದೂರಿನ  ಮಗಳ
ಧರೆ ಯೆಡೆಗಿನ  ಪಯಣ ..
ನಲಿದಳು ಪಡೆದು, 
ಹೊಸ  ಜನುಮವ ,"ಹನಿ" ರೂಪವ
ಜಾರಿದಳು  ಬಾನಿಂದ
ಭುವಿಯ  ಚೊಚ್ಚಲ  ಸೊಸೆಯಾಗಿ,
ಸೇರಿದಳು  ಪೃಥ್ವಿಯ  ಸಿರಿಯಾಗಿ

ಅವಳು  ಅವಳಾಗಿರೋ
ಕೆಲ  ಕ್ಷಣವ  ಹಂಬಲಿಸಿ ...
ಆಗಾಗ  ಬಸರಿನ  ನೆಪವೊಡ್ಡಿ ,
ಆವಿಯಾಗಿ  ತವರ  ಸೇರುವಳು
ಸಾವಿರ  "ಹನಿ -ಮುತ್ತು "ಗಳೊಂದಿಗೆ
ಧರೆ ಗೆ  ಮರಳುವಳು

ತವರಿನಲಿ "ಮೋಡವಾಗಿ"
ಅತ್ತೆ  ಮನೆಯಲಿ  "ನೀರಾಗಿ "
"ಹನಿ "ಯಾಗಿದ್ದಾಗ  ತಾನಾಗಿ
ತೀರ್ಥವಾಗಿ ,ಎಲ್ಲರ  ಜೀವ  ಜಲವಾಗಿ,
ಬದುಕುವಳು  ಪವಿತ್ರೆ  ಸಾರ್ಥಕವಾಗಿ!

Thursday, November 22, 2012

*ಹೀಗಿಬ್ಬರು ಕಳಂಕಿನಿಯರು* - ಮತ್ತೊಂದು ಹಳೆ ಕವನ

ಚಿತ್ರಕಲೆ  : ವೈಶಾಲಿ ಶೇಷಪ್ಪ
*ಹೀಗಿಬ್ಬರು ಕಳಂಕಿನಿಯರು* 


ಕತ್ತಲಿನಲ್ಲಿಬ್ಬರು  ಬೆಳಕಿನಲ್ಲೊಬ್ಬರು  ಬೆತ್ತಲಾಗುವ ಆಟ
ಸತ್ಯ ನಂಬಿಕೆ ಎಂಬೆರಡರ ನಡುವಿನ ರಂಗಿನಾಟ
ಇರುಳು ಸರಿದಿತ್ತು ಹಗಲು ಮೂಡಿತ್ತು
ನಂಬಿಕೆಯೂ ಮರೆಯಾಗಿತ್ತು  ಸತ್ಯ ಮರುಗಿತ್ತು

ಕುಸಿದ ಮೌಲ್ಯ ಮುರಿದ ಮನಸು ಬಿಡದ ಏಕಾಂತ
ಶ್ರಾವಣದ ಮಳೆ ಸುರಿದಿತ್ತು,ಮಿಂಚೊಂದು ಬಡಿದಿತ್ತು
ಹೊಸ  ಚಿಗುರು,ಉಸಿರಿನಲ್ಲೊಂದು ಉಸಿರು,ಚಿಲಿಪಿಲಿ ಹಕ್ಕಿ
ಮರೆಯಾದ ಪ್ರೀತಿಯ ಸ್ವರೂಪ ಸೇರಿತು ಮಡಿಲಿನಲಿ
ಸಂಭ್ರಮಿಸಿದಳು ದಿವ್ಯ ಮೌನದಲಿ,ಸಮಾಜದ ಕಳಂಕಿನಿ!

ಚಂಚಲೆಯೆಂಬ ಚುಕ್ಕೆ ಇಟ್ಟವರೆಷ್ಟೋ
ಜಾರಿಣಿಯೆಂಬ ಗೆರೆಯ ಕೂಡಿಸಿದವರೆಷ್ಟೋ
ವಿಕೃತಿಯ ಚಿತ್ತಾರಕ್ಕೆ ಬಣ್ಣ ತುಂಬಿ
ಪರಿಮಿತಿಯ ಮೀರಿ ನಾಲಿಗೆಯ ಅಶುದ್ದ ಮಾಡಿಕೊಂಡವರೆಷ್ಟೋ

ಗೆಜ್ಜೆ ಕಟ್ಟಿ ಲಜ್ಜೆ ಬಿಟ್ಟಳೆಂದು ಸತ್ಯ'ಕ್ಕೆ ಸೂಳೆಯೆಂಬ ಅಲಂಕಾರದ ಟೀಕೆ   
ನಂಬಿಕೆ'ಯೇ ನಿನಗೆ ಮಾತ್ರ ರಸಿಕ ಸೂಳೆ ಮಗನೆಂಬ ಕಿರೀಟವೇಕೆ
ನಿನ್ನಯ ಪತಿತತನ ಮರೆಮಾಚಲೂ ತಾಯಿಯೆಂಬ ಹೆಣ್ಣಿನ ಸೆರಗು ಬೇಕೆ
ಮನ ಬಂದಂತೆ ಪರರ ವ್ಯಕ್ತಿತ್ವಕ್ಕೆ ಕೆಸರೆರೆಚುವ ಚಪಲವೇಕೆ

ಈ ದೊಂಬರಾಟಕ್ಕೆ ಸಿಲುಕಿದ
ಜೀವವೊಂದು ಬಾಡಿ,ಪಿಸುಗುಟ್ಟಿತು  
ನಂಬಿಕೆಯೆಂಬ ಅಪ್ಪನೆ 
ನೀ ಜೋಡಿ ನಡೆದಿದ್ದರೆ
ಅನನ್ಯತೆ ಮೆರೆದ್ದಿದ್ದರೆ
ಸತ್ಯಯೆಂಬ ನನ್ನ  ಅಮ್ಮನು 
ಅನಿಸಿಕೊಳ್ಳುತ್ತಿದ್ದಳಲ್ಲವೇ ಪತಿಯ ಪತಿತೆ!

-ವೈಶಾಲಿ ಶೇಷಪ್ಪ

Friday, November 16, 2012

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....

"ದೇಹವನ್ನಾದರು ಸುಲಭದಲ್ಲಿ ಪರರೆದುರಿಗೆ ತೆರೆದಿಡಬಹುದೇನೋ ಆದರೆ ಆತ್ಮವನ್ನು ತೆರೆದಿಡುವುದು ಅತ್ಯಂತ ಕಠಿಣ"- ನನ್ನನ  ಅತೀಯಾಗಿ ಕಾಡುವ ವಾಕ್ಯವಿದು.ಈ ಒಂದು ಸಾಲು ಮನುಷ್ಯನಿಗೆ ತನ್ನ ಬಗ್ಗೆ ಹಾಗು ಇತರರ ಬಗ್ಗೆ ತನಗಿರೋ  ಬಲವಾದ ನಂಬಿಕೆ ವಿಶ್ವಾಸಗಳನ್ನೇ ಅಲುಗಾಡಿಸಿ ಬಿಡುವಂತದ್ದು.ಅಬ್ಬಾ!ಯಾರೆದುರಿಗಾದರು ನಮ್ಮ ಪ್ರತಿ ಆಲೋಚನೆ ಮನಸಿನ ತುಡಿತ ಆತ್ಮ ಚಟುವಟಿಕೆ ಸಹಿತವಾದ ನಿಜ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೆರೆದಿಡುವುದೆಂದರೆ ಸುಲಭದ ಮಾತಲ್ಲ.ಅದರಲ್ಲೂ ಹತ್ತಿರದ ಗಾಢ ಸಂಭಂದಗಳಂತು ಸದಾ ಇಂತಹ ಮುಕ್ತತೆಯ ಅನುಭೂತಿಯೊಂದರ  ನೀರಿಕ್ಷೆಯಲ್ಲಿರುತ್ತವೆ.ನಮಗಿರುವ ಅನಿವಾರ್ಯತೆ  ಭಯ ಒತ್ತಡ ಇತ್ಯಾದಿಗಳಿಂದ ಬೇಕಂತಲೇ ಮುಚ್ಚಿಡುವ ದೊಡ್ಡ ಸೂಕ್ಷ್ಮ ವಿಚಾರಗಳ ಸಂಗತಿ ಒತ್ತಟಿಗಿರಲಿ ಕೆಲವೊಂದು ಬಾರಿ ಸಣ್ಣ ಪುಟ್ಟ ವಿಷಯಗಳು ಸಮಯಕ್ಕೆ ನೆನಪಿಗೆ ಬಾರದಿದ್ದದಕ್ಕೋ ಅಥವಾ ಕ್ಷುಲಕವೆನಿಸಿಯೋ ಪರಸ್ಪರ ಹಂಚಿಕೊಳ್ಳದಿದ್ದಾಗ ಆಕಾರಕ್ಕಿಂತಲೂ ದೊಡ್ಡದಾಗಿ ಪರಿವರ್ತನೆಗೊಂಡು ಸಂಭಂದಗಳ ದೋಣಿಯನ್ನೇ ಮುಳುಗಿಸುವಷ್ಟು ತಾಕತ್ತನ್ನ ಪ್ರದರ್ಶಿಸಲು ನಿಂತು ಬಿಡುತ್ತವೆ.

ಹೊರ ಜಗತ್ತಿನ ಮುಂದಿರಲಿ ಮೌನದಲ್ಲಿ ಎಷ್ಟು ಬಾರಿ ನಾವುಗಳು ನಮ್ಮಲ್ಲಿರುವ ಅಭಿವ್ಯಕ್ತಿಗೆ ಸ್ವತಂತ್ರ ಕೊಟ್ಟಿರಬಹುದು?ಅವನೆಲ್ಲಾ ಸ್ವವಿಮರ್ಶಕನ  ಎದುರೆಳೆದು ನಮ್ಮನ್ನು ನಾವೇ ಇಡಿಯಾಗಿ ವಿಮರ್ಶಿಸಿರಬಹುದು? ಯಾವಾಗಲು ರೇಸಿಗೆ  ಬಿದ್ದಂತೆ ಮತ್ತೊಬ್ಬರ ಮುಖವಾಡ ಕಳಚೋ ಹಿಂದಿರುವ ನಾವುಗಳು ನಮ್ಮೊಳಗಿರುವ ಮುಖವಾಡಗಳ ಎಳೆಯೋ ಪ್ರಯತ್ನ ಪಡುವುದು ವಿರಳ.ನಾನು ಕಣ್ಣು ಮುಚ್ಚಿ ಅಂತದ್ದೊಂದು ಪ್ರಯತ್ನ ಮಾಡಿದಾಗೆಲ್ಲ ಅವಳೇ ನೆನಪಾಗುತ್ತಾಳೆ.ಅಮ್ಮ ಅಪ್ಪ ಅಜ್ಜಿನ ಹೊರತು ಪಡಿಸಿ ಅವಳೊಬ್ಬಳೇ ನನ್ನ ಉಸಿರಿನ ಏರಿಳಿತಗಳ ಮೇರಿಗೆ ಮನಸಿನ ಸ್ಥಿತಿಗತಿಗಳ ತಾನೆ ಅನುಭವಿಸಿದಷ್ಟು ನಿಕರವಾಗಿ ಹೇಳಿಬಿಡುತ್ತಿದ್ದವಳು.ಇಂತಹ ಗೆಳತಿ ಗೆಳತಿಗಿಂತಲೂ ಹೆಚ್ಚು ಆತ್ಮ ಸಹೋದರಿ ಎನಿಸಿಕೊಂಡವಳಿಗೂ ಸಹ ನನ್ನದೊಂದು  ವಿಚಿತ್ರ ಸ್ವಭಾವದ ಪರಿಚಯವಿರಲಿಲ್ಲ.ಅದೇನಂದರೆ ನಾನು ಕೆಲವೊಮ್ಮೆ ಕಾರಣವೇ ಇಲ್ಲದ ಕಾರಣಕ್ಕೆ ಯಾರೋ ಎಂದೋ ಚುಚ್ಚಿದ ಮಾಸದ ಗಾಯದ ಕನವರಿಕೆಗಳಿಗೆ ನನ್ನದೇ ಕೆಲವು ದೋಷಗಳಿಂದ ಬಿದ್ದ ಪೆಟ್ಟಿನ ಕಲೆಗಳಿಗೆ ಸುತ್ತಮುತ್ತಲಿನೆಲ್ಲರು ಹಕ್ಕುದಾರರೆನ್ನುವಂತೆ ನನ್ನ ಅಪ್ತರಿಂದ ದೂರ ಸರಿದು ಬಿಡುತ್ತೇನೆ.


ನಾನು ಚಿಕ್ಕವಳಿದ್ದಾಗ ಆಲೂ ಬಟಾಟ ಪುರಿ ಬಾಯಿಚಪ್ಪರಿಸಿ ಆಸೆ ಪಟ್ಟು ತಿನ್ನುತ್ತಿದ್ದೆ .ಒಮ್ಮೆ ಅಮ್ಮ ನನ್ನ ತಟ್ಟೆಯಿಂದ ಅದನ್ನ ತಿನ್ನಲ್ಲು ನೋಡಿದಳು,ಅಷ್ಟೇ ಆಗಿದ್ದು,ಅಂದಿನಿಂದ ಆಲೂ ಚಾಟ್ ಮುಟ್ಟಿದವಳಲ್ಲ ನಾನು!ನಂಗಿಷ್ಟ ಅಂತ ಎಷ್ಟು ಸಲ ಆಲೂ ಚಾಟ್ ಅಪ್ಪನಿಗೆ ಹೇಳಿ ತರಿಸಿ ಅಮ್ಮನಿಗೆ ತಿನ್ನಿಸಿದ್ದೇನೋ ಲೆಕ್ಕವಿಲ್ಲ ಆದರೆ ನಾನು ಮಾತ್ರ ಅದನ್ನ ಪೂರ್ತಿ ತ್ಯಜಿಸಿದೀನಿ.ನಾನು ಹೆಚ್ಚು ಇಷ್ಟಪಡುವುದನ್ನು ನನ್ನವರೆ ಆಯ್ದು ಕೊಂಡರೆ ಅದನ್ನು ನಾನು ಕೈ ಬಿಟ್ಟು ಅವರ ಮೂಲಕವೇ ಅನುಭವಿಸುವ ಸುಡುಗಾಡು ಭಾವವೋ ದುರ್ಬುದ್ಧಿಯೋ ಅಂತೂ ಅಪ್ತರನ್ನು ದೂರ ಮಾಡಿಕೊಳ್ಳೋ ಮತ್ತೊಂದು ವಿಧವು  ಬೆಳೆದುಕೊಂಡಿದೆ.ಹೀಗೆ ಅನೇಕಾನೇಕ ವೈವಿದ್ಯಮಯ ಕಾರಣಗಳಿಂದಾಗಿ ಸಣ್ಣ  ವೈರಾಗ್ಯವ ಅಪ್ಪಿಕೊಂಡೇ ಬದುಕುವ ಚಟವತ್ತಿಸಿಕೊಂಡಿದ್ದೇನೋ ಚಟವತ್ತಿಸಿಬಿಡುತ್ತಾರೋ  ಗೊತ್ತಿಲ್ಲ ಒಟ್ಟಾರೆ ಚಟವಂತು ಇದ್ದೆ ಇದೆ! ಈ ನಡವಳಿಕೆಯೂ ಸುಮಾರು ಸಲ ಉಪಯೋಗಕ್ಕೆ(ತಿಂಡಿ ∝ ತೂಕ) ಬಂದದ್ದು ಉಂಟು ಅದರಿಂದಾಗಿ ಉತ್ತಮ ಸ್ನೇಹ ಕಸಿದು ಹೋದದ್ದು ಉಂಟು. ಆದರೆ ಅವಳಿದ್ದಾಳಲ್ಲ... ಅವಳು ಮಾತ್ರ ಹೀಗೇಕೆ? ಅವಳೇ "ಅವನಿ".ಅವಳು ಅದೆಷ್ಟು ಮುನಿಸಿಕೊಂಡಿದ್ದಾಳೋ ಒಳಗೊಳಗೇ ವ್ಯಥೆ ಪಟ್ಟಿದ್ದಾಳೋ ನೆಪಕ್ಕಾದರು ಯಾರ ಮುಂದೆಯೂ ಚಕಾರವೆತ್ತಿರುವ ಸುದ್ದಿ ಬಂದಿಲ್ಲ ನೇರ ನನ್ನನ್ನೇ ಕಟುವಾಗಿ ಪ್ರಶ್ನಿಸಿದ್ದು ಇಲ್ಲ.ಅವನಿ' ಮೌನವನ್ನೂ ಮಾತಾಡಿಸ ಬಲ್ಲಂತಹ  ಸಂವೇದನಶೀಲತೆವುಳ್ಳ ವ್ಯಕ್ತಿತ್ವದವಳು.ನೂರು ಸುಳ್ಳುಗಳ ನಡುವೆ ಒದ್ದಾಡುತ್ತಿರುವ ಒಂದು ಸತ್ಯವ ಹೆಕ್ಕಿ ಅದರಂತರಾಳವ ಅರಿಯುವ ಸಿದ್ದಿ ಅವಳಿಗೆ ಮಾತ್ರ ಸಂದಿರುವಂತೆ ಪ್ರೀತಿಸುವ ಜಾಯಮಾನದವಳು!ನನಗೆ ಇಂತವಳ ಪರಿಚಯವಾಗಿ ಅದಾಗಲೇ ಹತ್ತೊಂಬತ್ತು ವಸಂತಗಳಾಗಿವೆ.



ಚಿತ್ರಕೃಪೆ:ಮದನ್ ಕುಮಾರ್


ಒಂದೇ ಓಣಿ  ಒಂದೇ ಶಾಲೆ ಒಂದೇ ಟುಷ್ಯನ್ ಅಂತ ಒಟ್ಟೊಟ್ಟಿಗೆ ಬೆಳೆದ ಹುಡುಗಿಯರು ನಾವು.ಶಾಲೆಯಲ್ಲಿ ನಾವಿಬ್ಬರು ಪರಸ್ಪರ ವಿನಿಮಯಿಸಿಕೊಳ್ಳುತ್ತಿದ್ದ ನಗೆ ತಪ್ಪಿದರೆ ಒಂದೆರೆಡು ಮೊಟಕು ಮಾತುಗಳಿಗಷ್ಟೇ ಪರಿಚಯಸ್ತರು ಅನ್ನಿಸಿಕೊಂಡಿದ್ದೆವು.ಅದಕ್ಕೂ ಮೀರಿದ ನಿಜ ಸ್ವರೂಪದ ನವಿರಾದ ಗೆಳೆತನ ಬೆಳೆದಿದ್ದು ನಂತರದ ದಿನಗಳಲ್ಲಿ ಎಂಟು ವರುಷಗಳ ಕೆಳಗೆ.ಈ ಎಂಟು ವರುಷದ ಸುಧೀರ್ಘ ಗೆಳೆತನದಲ್ಲಿ ನಾವಿಬ್ಬರು ಒಬ್ಬರನೊಬ್ಬರು ನೋಡದಂತ ನಡೆದ ನಿತ್ಯದ ರಾಮಾಯಣಗಳನ್ನ ಹಂಚಿಕೊಳ್ಳದಂತ ದಿನವೇ ಹುಟ್ಟಿರಲಿಲ್ಲ.ಅವನಿ ಮುಗ್ದ ಹುಡುಗಿಯಾದರೂ ಚುರುಕು ಸ್ವಭಾವದವಳು ವ್ಯವಹಾರ ವಿಷಯಗಳಲ್ಲಿ ನನಗಿಂತ ಚಾಣಾಕ್ಷೆ ನನಗಿಂತಲೂ ಒಂದು ಕೈ ಹೆಚ್ಚು ಧೈರ್ಯವಂತೆ.ಗಡುಸುಗಾರ್ತಿ ಮಾತುಗಾರ್ತಿ  'ಭೂಮಿ'ಯಷ್ಟೇ ಸಂಯಮವುಳ್ಳ ನನ್ನ 'ಅವನಿ' ಎಲ್ಲರ ಮನಸಲ್ಲೂ ಸುಲುಭದಲ್ಲಿ ನೆಲೆಯೂರಿಬಿಡುತ್ತಿದ್ದ ಸ್ನೇಹಮಯಿ.

ದಿನಾಂಕದ ವಿಚಾರದಲ್ಲಿ ಅತಿ ಮರಗುಳಿಯಾದ ನನಗೆ ಪ್ರತಿಯೊಂದನ್ನು ತಪ್ಪದೆ ನೆನಪಿಸಿ ನಾನು ಯಾವುದೇ ವಿಶೇಷ ದಿನಗಳನ್ನ ಕಾರ್ಯಗಳನ್ನ ಮರೆಯದಂತೆ ನೋಡಿಕೊಳ್ಳುತ್ತಿದ್ದಳು.ಅದೆಷ್ಟರ ಮಟ್ಟಿಗೆಂದರೆ ಅವನಿ'ಯ ಹುಟ್ಟು ಹಬ್ಬವನ್ನೂ ಅವಳೇ ನೆನಪಿಸಬೇಕಿತ್ತು " ಸ್ವೀಟಿ ಸಂಜೆ ಮನೆಗೆ ಬಾರೋ ಪಾರ್ಟಿ ಇದೆ....ಅದಿರಲಿ ನನಗೆ ವಿಶ್ ಮಾಡೋಲ್ವ ನೀನು?" ನಗುತ್ತಲೇ ಕೊಂಚವೂ ಮುನಿಸಿಲ್ಲದೆ ವರ್ಷ ವರ್ಷ ಫೋನ್ ಅಚ್ಚುತ್ತಿದ್ದಳು ಅವನಿ.ಇನ್ನು ನನ್ನ ಹುಟ್ಟು ಹಬ್ಬಕ್ಕೆ  ಸ್ನೇಹಿತೆಯರ  ಪೈಕಿ ಮೊದಲನೇ ವಿಶ್ ಅವಳದೆ! ಅವಳು ತೋರುತ್ತಿದ್ದ ಕಾಳಜಿ ಮೆರೆಯುತ್ತಿದ್ದ  ಹೃದಯ ವಿಶಾಲತೆ  ಯಾವುದಕ್ಕೂ ನನ್ನ ಬಿಟ್ಟು ಕೊಡದ ಅವಳ ಅಮ್ಮನಂಥ ಆಪ್ತತೆಯೇ ನಾನು ಬಹುವಾಗಿ ಹಚ್ಚಿಕೊಂಡಿದ್ದು.ಒಡ ಹುಟ್ಟಿದ ಸಹೋದರಿ ಭಾಗ್ಯ ಕಾಣದ   ನನಗೆ ಒಂದು ವರುಷ ಹಿರಿಯವಳಾದ ಅವನಿ'ಯೇ ಅಕ್ಕ ಆದಳು.ಇಂತಿಪ ಅವನಿ'ಯನ್ನು ನಾ ದೂರ ಮಾಡಿಕೊಂಡಿದ್ದಾದರು ಯಾಕೆ ಅನ್ನೋ ನಿರ್ದಿಷ್ಟ ಕಾರಣ  ನನಗೂ  ತಿಳಿದಿಲ್ಲ.ನಮ್ಮಿಬ್ಬರ ನಡುವೆ ಅಂತದ್ದೊಂದು ಕಡೆ ಕೊನೆಯಿಲ್ಲದ ಮೌನ ಸೃಷ್ಟಿ ಮಾಡಿ ನಿಲ್ಲಿಸಿರುವುದಕ್ಕೆ ಯಾರದೋ ವೈಯುಕ್ತಿಕ ಹಿತಾಸಕ್ತಿಗಳಿದ್ದಿರಬಹುದು ಒಳಸಂಚಿದ್ದಿರಬಹುದು ಅದೇನಿದ್ದರು    ಇವೆಲ್ಲದಕ್ಕೂ ನನ್ನ ಅವನಿ'ಯ ಸುಂದರ ಮಧುರ ಗೆಳೆತನವಂತು ಕಾರಣವಲ್ಲವೆಂಬ ಸತ್ಯದ ಅರಿವು ಮಾತ್ರ ನನಗಿತ್ತು ಅವಳಿಗೂ ಇದ್ದಂಗಿತ್ತು.ಅದುವೇ ನನ್ನನ್ನು ಇಂದಿಗೂ ಆ ಮೌನ ಕಾಪಾಡಲು ಪ್ರೇರೇಪಿಸುತ್ತದೆ ಅಂತೆಯೇ ಅವಳಿಗೆ ಆ ಮೌನ ಮುರಿಯಲು!


ನನ್ನ ಇತರೆ ಸ್ನೇಹಿತರು ಬಂಧುಗಳು ಕೂಡ ನನ್ನೀ ತರ ತರನಾದ ವೈರಾಗ್ಯಕ್ಕೆ ಅಂಟಿಕೊಳ್ಳುವ ಸ್ವಭಾವದ ರುಚಿ ನೋಡಿದ್ದುಂಟು ಅವೆಲ್ಲವೂ ಒಂದೆರೆಡು ದಿನ ವಾರದೊಳಗೆ ಮುಗಿಯುತ್ತಿತ್ತು.ಅದೇಕೋ ಅವನಿ'ಯ ವಿಚಾರದಲ್ಲಿ ತುಸು ಜಾಸ್ತಿ ಎಂಬಂತೆ ಸಾಗಿ ಬಿಟ್ಟಿದೆ.ನಾನು ಅವಳನ್ನೆಷ್ಟೇ  ದೂರವಿಟ್ಟರು ಅವಳು ನನ್ನನು ಎಂದಿನಂತೆ ಪ್ರೀತಿಸುತ್ತಾಳೆ ಮುಂದೆಂದ್ದಾದರು ಅವಳೆದುರು ನಿಂತರೆ ಹಿಂದಿನ ಹಾಗೆ ಆಲಂಗಿಸುತ್ತಾಳೆ ಅನ್ನೋ ಧೃಡ ನಂಬಿಕೆಯೇ?ನಮ್ಮಿಬ್ಬರ ಸ್ನೇಹದ ಪರೀಕ್ಷೆಯೇ? ಅಥವಾ ನನ್ನ ಆವರಿಸಿಕೊಂಡಿರುವ ವಿಚಿತ್ರ ಸ್ವಭಾವ ಪಡೆದಿರುವ ವಿರಾಟ ಸ್ವರೂಪದ ನರ್ತನವೇ? ಗೊತ್ತಿಲ್ಲ! ಸದ್ಯದ ನನ್ನ  ಈ ಮೌನಕ್ಕೆ ಮೂರು ವರ್ಷ ಆರು ತಿಂಗಳ ಪ್ರೌಡತೆ! ಮೊದಲೆಲ್ಲ ಮನೆಗೆ ಹುಡುಕಿಕೊಂಡು ಬಂದು ಬಿಡುತ್ತಿದ್ದವಳನ್ನ ಕೆಲವೊಮ್ಮೆ ಮನೆಯಲ್ಲಿ ಇದ್ದುಕೊಂಡೆ ನನ್ನ  ಕೋಣೆ ಮೂಲೆ ಸೇರಿ ಅಮ್ಮ ಅಪ್ಪನ ಬಾಯಲ್ಲಿ ಇಲ್ಲವೆಂದು ಸುಳ್ಳು ಆಡಿಸಿ ಕಳಿಸಿ ಬಿಡುತ್ತಿದ್ದೆ.ಮನೆಯವರಿಗೂ ನಂದು ಅತಿರೇಕದ ನಡವಳಿಕೆ ಅನಿಸಿ ಬಯ್ದಾಡುತಿದ್ದರಾದರು  ಮನಸಿಗೆ ತೋಚಿದಂತೆ ಆಡೋ ನನ್ನ ಬುದ್ಧಿಗೆ ಅವರೆಲ್ಲ ಸೋತು ಎಂದೋ ಶರಣಾಗಿದ್ದಾರೆ.ಆದರೆ ಅವನಿ'ಗೆ ಅವಮಾನಿಸಿ ಕಳಿಸೋದು ನನಗೆ  ಕೊಂಚವೂ ಇಷ್ಟವಿಲ್ಲದಿದ್ದ ಕಾರಣ ಪರಿಹಾರವೆಂಬಂತೆ ಮನಸು ಮಾಡಿ ಕೊನೆಗೂ ಒಂದು ಮೆಸೇಜ್ ಕಳಿಸಿ ಬಿಟ್ಟಿದ್ದೆ"ಇತ್ತೀಚಿಗೆ ತುಂಬಾ ಬ್ಯುಸಿ ಆಗಿದ್ದೀನಿ ಮನೇಲಿ ಇರೋದು ಕಡಿಮೆ ಬರೋ ಮುಂಚೆ ಮೆಸೇಜ್ ಕಳಿಸಿ ನಾನಿರುವುದ  ಕಾತರಿ ಪಡಿಸಿಕೊಂಡು ಬಾ ಸುಮ್ಮನೆ ಬರೋ ತೊಂದರೆ ಬೇಡ ನಿನಗೆ.ಜೋಪಾನ ಮಾಡು." ಈಗ  ಅವನಿ'ಗೂ ಅವಳದೇ ಆದ ಕೆಲಸ ಅಲ್ಲಿನ ಸ್ನೇಹಿತರಿದ್ದಾರೆ ಹಾಗಿದ್ದರು ವಾರಕ್ಕೆ ಎರಡು ಸಲ ಪರ್ಸನಲ್ ಮೆಸೇಜ್ ಮೇಲ್ ರವಾನಿಸೋದ ಮರೆತಿಲ್ಲ."ಹೇಯ್ ಹನಿ ಊಟ ಆಯ್ತಾ? ಹೇಗಿದ್ದೀಯ?ನಿನ್ನ ನೋಡಬೇಕಂತ ಆಸೆ ಆಗಿದೆ.ಪ್ಲೀಸ್ ಈ ವೀಕೆಂಡಾದರು ಸಿಗುತ್ತಿಯ?" ಅನ್ನೋ ಅವಳ ಮೆಸೇಜ್ ಗಳಿಗೆ ಮನಸಿನಲ್ಲೇ ಉತ್ತರಿಸಿಕೊಳ್ಳುತ್ತೇನೆ.ಈ ದಿನದವರೆಗೂ ಅವಳಿಗೆ ಮೆಸೇಜ್ ನಲ್ಲಿ ಉತ್ತರಿಸೋದು ಅವಳ ಕರೆ ಕಟ್ ಮಾಡಿದ್ದಾಗ ಅಥವಾ ಆಕೆಯ "ಮನೆಗೆ ಬರಲಾ?" ಎಂಬ ಆರ್ತ ಬಿನ್ನಹಗಳ ಎಸಎಂಎಸ ಬಂದಾಗ ಮಾತ್ರ.

ಈ ರೋಧನೆ ಹಿಂದೆಯೂ ಕಾಣದ ಮುಗುಳ್ನಗೆ ಪ್ರೀತಿ ಅರಳುತ್ತಿದೆ.ನನ್ನ ಮೌನಕ್ಕೆ ಯಾರದೋ ಮಾತುಗಳಿಗೆ ಸೇತುವೆ ಆದ ಸಾರ್ಥಕತೆಯಿದೆ.ಹಪ ಹಪಿಸಿ ಬರೊ ಬಿಕ್ಕಳಿಕೆಗಳಿಗೆ ಅವನಿಯ ನೆನಪಿನ ಲೇಪನವಿದೆ.ಒಟ್ಟಿನಲ್ಲಿ ನಾ ಅವನಿ ಮುಂದೆ ಧರಿಸಿರುವ ಮುಖವಾಡ ಒಂಥರಾ ಹಿತಾನುಭವ ಅಷ್ಟೇ ಕಾಡುವ ದುಃಖದ ಕಣ್ಣೇರುಗಳು ನೀಡುತ್ತಿದೆ.ಎಲ್ಲದಕ್ಕೂ ಮಿಗಿಲಾಗಿ ಅವನಿ ಇಲ್ಲದ ಬದುಕು ಹಲವು ಪಾಠ ಕಲಿಸಿದೆ.ಇತ್ತೀಚಿಗೆ ಸ್ವಲ್ಪ ಪೆದ್ದುತನ ಕಳಚಿ ಹೋಗಿ ಅದರ ಬದಲಿಗೆ ಸಾಸಿವೆಯಷ್ಟು ಚುರುಕುತನ ಬೆಟ್ಟದಷ್ಟು ಮೊಂಡುತನ ಕುಕ್ಕರಿಸಿದೆ.ಹಿಂದಿಗಿಂತಲೂ ಹೆಚ್ಚು ಧೈರ್ಯವಂತಳಂತೆ ನಟಿಸಲು ಕಲಿತಿರುವೆ.ಹಾಗೆಯೇ ಎಲ್ಲಾ ಮುಖ್ಯ ಕಾರ್ಯಕ್ರಮಗಳ ದಿನಾಂಕಗಳನ್ನು  ಕಡ್ಡಾಯವಾಗಿ ಬರೆದಿಟ್ಟುಕೊಂಡು ನೆನಪಿಗೆ ತಂದುಕೊಳ್ಳುವ ಯತ್ನ ನಡೆಸುತ್ತೇನೆ ಇನ್ನು ಕೆಲವನ್ನು ಎಂದಿನಂತೆ ಅವನಿ ಇಂದಿಗೂ ಮೆಸೇಜ್ ಮಾಡಿ ನೆನೆಪಿಸುವುದ ಮರೆತಿಲ್ಲ.ಮೊನ್ನೆ ರಾತ್ರಿ 12 ಆಗುತ್ತಿದಂತೆಯೇ ಅವನಿಯ ಹುಟ್ಟು ಹಬ್ಬ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ನೆನಪಿನಲ್ಲಿ  ನಿಂತ್ತಿತ್ತು!ಅದೇ ಖುಷಿಯಲ್ಲಿ ಫೋನ್ನಲ್ಲಿ  ನಂಬರ್ ಕೀ ಒತ್ತುತಲೇ ..ಯಾವುದೊ ದುಃಖ ಉಮ್ಮೆಳಿಸಿ ತುಟಿ ಕಚ್ಚಿ ನುಂಗಿ ಫೋನ್ ಆಚೆ ಎಸೆದೆ."ಹೇಯ್ ಡಿಯರ್ ವಿಶ್  ಮಾಡೋಲ್ವಾ?ಮನೆಗೆ ಬಾರೋ" ಮೆಸೇಜ್ ಗಾಗಿ ಮುನ್ನೋಡುತ್ತ ಕೂತಲ್ಲೇ ನಿದುರೆಗೆ ಜಾರಿ ಹೋದೆ...  


"ಬೆಳಕಿನ ಬೆನ್ ಹಿಂದೆಯೇ,
ಕತ್ತಲಿರುವಂತೆ.....
ಎಲ್ಲಾ  ಶ್ರೇಷ್ಟ ಪ್ರೀತಿಗೂ,
ಸ್ವಾರ್ಥದ ಸೆರಗುಂಟು.....
ತ್ಯಾಗದ ದೇಣಿಗೆ ಉಂಟು....
ಎಲ್ಲಾ ನಲಿವಿನ ಮುನ್ನುಡಿಯಲ್ಲೇ,
ಕೇಳದ ಚಿತ್ಕಾರದ ನೆರಳುಂಟು.....
ಎಲ್ಲಾ ಸತ್ಯದ ಗರ್ಭದಲ್ಲೂ,
ಚಿಕ್ಕ ಸುಳ್ಳಿನ ಕಿಡಿಯುಂಟು...."

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....


Sunday, November 11, 2012

ಹಳೆಯದೊಂದು ಕವನ

ಚಿತ್ರ ಕೃಪೆ : ಅಂತರ್ಜಾಲ 



ನಿರಂತರ!

ಎತ್ತರದ ಗೋಡೆಗಳ ಕೋಟೆ
ಅಂಗಳದಲಿ ಬಾಡಿದ ಹೂವಿನ ಮೋರೆ
ಗೊಡವೆ ಇಲ್ಲದೆ ನೆಲ್ಲಕ್ಕೆ ಚಿದಿರಿದ ದೇಹ
ಕಳಚಿದಂತಿದೆ ಯವ್ವನದ ಪೊರೆ
ಚೆಲುವಿಗೆ ಹಿಂದೊಮ್ಮೆ ಇವಳೇ ಅರಸಿ!

ಹೊರ, ಹಸಿರು ಬಳ್ಳಿಯ
ಒಣಪು ಬಿನ್ನಾಣದ ಸುಂದರ ವನ
ಹೆಮ್ಮರಗಳ ಆಸರೆಯ
ತೋಳ ತೆಕ್ಕೆಗೆ
ತೇವ ನೆಲದ ಆರೈಕೆಗೆ                                                                                                                                                                                        ಅರಳಿದ ನೂರಾರು ಹೂ ಮನ 
ಅಂದೆಲ್ಲೋ ದಟ್ಟ ಕಾಡಿನ ಗರ್ಭದೊಳು
ಸುಗಂಧ ಬರಿತ ಹೂವಾಗಿ ನಿಂತು
ಸೆಳೆದಿದ್ದು ಬರಿಯ ವಿಷ ಮನವನೆ
ಮುಳ್ಳಿನ ನಡುವೆಯೇ ನಗುವ
ಕೇದಿಗೆಯ ಬಾಳು

ಪ್ರೀತಿಗಾಗಿ ಬಂದವರೆಲ್ಲ
ದೇವತೆ ಎಂದು ಬಣ್ಣಿಸಿದರಲ್ಲಾ
ಕೊನೆಗೂ ಸ್ಥಾಪಿಸಿದ್ದು
ಮನದಲ್ಲಲ್ಲ ಮನೆಯಲ್ಲಲ್ಲ
ಗುಡಿಯಲ್ಲೇ!
ದರ್ಶನಕ್ಕಾಗಿ
ನಿತ್ಯದ ಕರ್ಮಕ್ಕಾಗಿ

ಪರದೆ ಎಳೆಯುವ ಮುನ್ನವೇ
ಮುಗಿದ ಕಥೆಯ
ಪಾತ್ರಧಾರಿಗಳೆಲ್ಲ ಬರಿಯ
ಉಸಿರಾಡೋ ಶವ

ಏನಾದರು ನಟಿಸಲೇ ಬೇಕು
ನಟಿಸಿ ಮೆಚ್ಚಿಸಲೇಬೇಕು
ಏಷ್ಟಾದರೂ ಕಥೆಯಿಲ್ಲದ ನಾಟಕಕ್ಕೂ
ಸೂತ್ರಧಾರಿಯು ಅವನೇ ತಾನೇ (ನಗು)

ಬಿಸಿಲಲ್ಲೋ ಮಳೆಯಲ್ಲೋ
ತನ್ ಹೆಸರ ನೆರಳಲ್ಲೋ
ನರಳಿಸಿ ಬೇಯಿಸಿ ಅವಮಾನಿಸಿ
ಹೇಗೋ ಬದುಕಿಸಿ ಬಿಟ್ಟ
ವ್ರಧ್ಯಪ್ಯದ ಅಂಚಿನಲಿ
ಕೋಟೆ ಬೇಲಿಯ ಬಾಳಿಗೆ ಬಿಡುಗಡೆಯನಿಟ್ಟ

ಅವಳು ಹೊರ ನಡೆದಂತೆ
ಕಂಡಿದ್ದು ಅವಳದೇ ಹಳೆ ಪ್ರತಿಬಿಂಬ
ಒಳ ಹೊಕ್ಕಿದ ದೃಶ್ಯ
ಕೂಗಲು ದ್ವನಿ ಇಲ್ಲ
ಹಿಡಿದು ನಿಲ್ಲಿಸಲು ಬಲವಿಲ್ಲ
ಗೋಡೆಗಳ ಮಧ್ಯೆ
ಮತ್ತದೆ ಕಥೆಯಿಲ್ಲದ ನಾಟಕಕ್ಕೆ
ರಂಗ ಸಜ್ಜು

ಇಷ್ಟಾದರೂ
ಸೂತ್ರಧಾರಿಯು ಅವನೇ ತಾನೇ (ಅಕ್ರೋಶ)

Tuesday, November 6, 2012

ಸಿಕ್ಕ ಸಿಕ್ಕ ಹೆಣ ಹೊರುತ್ತಿದ್ದವ!ಕಥೆಗಳ ಆಚೆಗೂ ಬದುಕ್ಕಿದ್ದವ!

ಸಾಯಂಕಾಲದ  ಪೂಜಾ ಕೈಂಕರ್ಯ ಸುಪ್ರಭಾತ ಇವ್ಯಾವುದರ ಲಕ್ಷಣವಿಲ್ಲದ ಮನೆಯಲ್ಲಿ ಬೋಳು ಮಂಡೆ ಮಗು ವಿನಾಕಾರಣ  ಆಭ್ಯಾಸವೆಂಬಂತೆ ತಲೆ ಕೆರೆದು ಮಂಕು ಮೂರೆ ಇಟ್ಕೊಂಡಂಗಿತ್ತು ನನ್ನ ಅವಸ್ಥೆ!ಇದ್ದಾಗ ಹಾಳು  ಕೆರೆತ ಅನಿಸುವುದು ಇಲ್ಲಿದಿದ್ದಾಗ ನವೆಯ ಸವಿ ನೆನಪಲ್ಲಿ ತೇಲಿಸುತ್ತೆ.ಅದೇ ಮತ್ತಿಗೆ ಸುಖಾ ಸುಮ್ಮನೆ ಕೆರೆದು ಕೊಳ್ಳೋದು.ಅಮ್ಮನಿಲ್ಲದ ಮನೆಯೂ  ಸಹಜವಾಗಿ ಅಂತದ್ದೊಂದು ಇಕ್ಕಟಿಗೆ ದೂಡುತ್ತೆ  ನನ್ನನ.ಅವಳು ಯಕ್ಷರನ್ನು  ಮೆಚ್ಚಿ ನೆಚ್ಚಿಕೊಂಡವಳಾದರೆ ನಾನು ಯಕ್ಷರಿಗೂ ಮೀಗಿಲಾಗಿ  ಪ್ರತ್ಯಕ್ಷರಲ್ಲಿ ನಂಬಿಕೆ ಇಟ್ಟವಳು ಅಪ್ತವಾಗಿಸಿಕೊಂಡವಳು.ಹಾಗಾಗಿ ಅಮ್ಮನ ಮೂರು ತಾಸಿನ ನಿತ್ಯದ ಪೂಜಾ ವೈಕರಿ ಅವಳ ಕೊಂಚ ಅತಿ ಎನ್ನುವಂತ ದೇವರ ಮೇಲಿನ ಶ್ರದ್ಧೆ ಭಕ್ತಿಯನ್ನು ಉಡಾಫೆ ಹಾರಿಸಿ ಹಂಗಿಸಿ ಅವಳ ಮೊಂಡು ಮೂಗಿನ ತುದಿಯ ಸವಿಸ್ತಾರವಾದ ಜಾಗದಲ್ಲಿ ಬರ್ರನೆ ಜಿನುಗುವ ಚೂಪು ಹುಸಿ ಮುನಿಸನ್ನ ಕೆಣಕಿ ವಿವಿದ ಬಗೆಯ ಅಷ್ಟಾರ್ಚನೆ ಶತನಾಮಾವಳಿ ಮಾಡಿಸಿಕೊಂಡು ಮುಖ ಊದಿಸಿಕೊಳ್ಳೋ  ನಾನು ಅವಳಿಲ್ಲಾದಾಗ ಮನಸಲ್ಲೇ ಅಳುತ್ತಾ ಕೊರಗೋದು ಅವಕ್ಕಾಗೆ!

ನಿಂಗೆ ನಾನಂದ್ರೆ ಕಿಂಚಿತ್ತು ಭಯ ಗೌರವವಿಲ್ಲ ನಮ್ಮ ಮನೇಲಿ ಇಂತ ತಲೆ ಹರಟೆ ಅದೇಗೆ ಹುಟ್ಟಿತೋ ಅಂತ ಮುನಿಯೂ ಅಮ್ಮ.ನಂತರ ನನ್ನ ತುಂಟ ಅರಗಿಣಿ ಇಲ್ಲದ  ಬದುಕು ನೀರಸ ಅನ್ನುತ್ತಾ ಆಲಂಗಿಸೋ ಅಮ್ಮ.ಇಬ್ಬರಿಗೂ ಭೇದ  ಬಗಿಯದೆ ಇಬ್ಬರನ್ನು ಹವಣಿಸೋ ನಾನು.ಒಟ್ಟಿನಲ್ಲಿ ಸದ್ದು ಗದ್ದಲಗಳಿಲ್ಲದ ಮೌನಿ ಮನೆ ನನಗೆ ರುಚಿಸುವುದಿಲ್ಲ.ಪುಣ್ಯಕ್ಕೆ ಎಂದಿನಂತ ವೈಪರಿತ್ಯದ ವಾತಾವರಣ ಮರಳಲಿತ್ತು.ಮೂರು ದಿನದ ನೆಂಟರ ಮನೆ ಸುತ್ತಾಟ ಮುಗಿಸಿ ಹಿಂದಿರುಗುವವರಿದ್ದ ಅಪ್ಪ ಅಮ್ಮನ ದಾರಿ ನೋಡುತ್ತಾ ಹೂವಿನ ಉರಲಿಗೆ ನೀರು ತುಂಬಿ ಸೇವಂತಿ ಹೂವಿಂದ ಅಲಂಕರಿಸುತ್ತ ಕುಳಿತ್ತಿದ್ದೆ.
*
ಹಗಲಿಗೆ ಪೂರ್ಣ ವಿರಾಮದ ಪರದೆ ಎಳೆದು ಇರಳು ತೆರೆದುಕೊಳ್ಳೋ ಹೊತ್ತಿನಲ್ಲಿ ವಿದ್ಯುತ್ ಕಡಿತದಿಂದಾಗಿ ಚೆಲ್ಲಿದ್ದ ಚಂದ್ರನ ದೀಪದ ಮಬ್ಬಲೇ ಮಿನುಗುತ್ತಿತ್ತು  ನಮ್ಮನೆ ಎದುರಿನ  ಡಂಬಾರು ರಸ್ತೆ.ಮೊರೊತ್ತು ಅಳುವ ಪಕ್ಕದ ಮನೆಯ ನಾಯಿ ಕುನ್ನಿ ಅಗಾಗ  ನೆಲ ಕೆರಿತಿದ್ದ ಅಡಿಗೆ ಮನೆ ಹೊಕ್ಕುತ್ತಿದ್ದ ಮೂಲೆ ಮನೆ ಆಂಟಿ ಸಾಕಿದ ಕಳ್ಳ ಬೆಕ್ಕು ಅವರಿವರ ಮನೆ ಕತೆಗಳ ಪಟ್ಟಾಂಗ ಹೊಡೆದು ಕಿವಿ ಕೊರೆಸಿಕೊಳ್ಳು ನಮ್ಮ ಬೀದಿಯ ಪಟಾಕಿ ಮಹಿಳಮಣಿಗಳು ಇವೆಲ್ಲವೂ  ಯಾವುದೊ ಸಾಮೂಹಿಕ ದಿಗ್ಬಂದನೆಗೊಳಗಾದಂತೆ  ಜಗತ್ತು ಸಂಜೆ ಏಳಕ್ಕೆ ಸ್ಮಶಾನ ರೂಪ ತಳೆದಿತ್ತು ಹೊರಗೆ.

ಅಮ್ಮನಿಲ್ಲದ ಮನೆ,ಆಗಷ್ಟೇ ಹಚ್ಚಿದ ಕ್ಯಾಂಡಲ್ ಬೆಳಕಿನಲ್ಲಿ ಕರಗುತಿದ್ದ ಗಾಢ ಕತ್ತಲು,ಬ್ಯಾಟರಿ ಮುಗಿದು ಸ್ವಿಚ್ ಆಫ್ ಆಗಿದ್ದ ಗ್ಯಾಜೆಟ್ಸ್,ಟಿವಿ ಸದ್ದಿಲ್ಲದ ನಿರ್ಜನ ಮನೆಯ ಏಕಾಂಗಿ ಮೌನದ  ಜೊತೆಗಾರ್ತಿ ಪರಿಮಳ ಬೀರದ ಸೇವಂತಿ.ಇಂತದ್ದೊಂದು ನೆನಪಿನಂಗಳಕ್ಕೆ  ಸರಾಗವಾಗಿ ಜಾರುವ ಅನುಕೂಲಕರ ವ್ಯವಸ್ತೆಯ ಮಧ್ಯೇ ನೆನಪಾದವ 'ಸಾದಿಕ್ ಅಜ್ಜ'.ಅದು ಹಾಗೆ ಒಬ್ಬ ಸಾಮಾನ್ಯ ವ್ಯಕ್ತಿ ನಾಯಕನೆನಿಸಿಕೊಳ್ಳಬೇಕಾದರೆ ಸದಾಚಾರಿ ಎನಿಸಿಕೊಳ್ಳಬೇಕಾದರೆ  ಅವನು ಒಂದೋ ಜೀವನುದ್ದಕೂ ಕಟಿನ ಬ್ರಹ್ಮಚಾರಿತ್ವ ಪಾಲಿಸಿರಬೇಕು ಅಥವಾ ಆದಷ್ಟು ಬೇಗ ನೆಲಕಚ್ಚಬೇಕು ಮಣ್ಣಲ್ಲಿ ಮಣ್ಣಾಗಬೇಕು.ಅವನಂದು ಹಾಗೆ ಸಾಯದಿದ್ದರೆ ಹೀಗೆಲ್ಲಾ ಅನಿಸುತ್ತಿರಲಿಲ್ಲವೇನೋ.ಆದರೆ ಅವನು ಈಗಿಲ್ಲ.ಅದರಿಂದಲೇ ಈ ನೆನಪು ಈ ಹೊಟ್ಟೆ ಕಲಸುವಿಕೆ.ಕಥೆ ಪುಸ್ತಕದ ಪುಟ್ಟಗಳ ಸೀಳಿ  ಹೊರ ನಡೆದಂತೆ  ಸಿನೆಮಾ ಪರದೆಗಳಲ್ಲಿ ಮಿಂಚುವ ಆದರ್ಶವಾದಿ ಪ್ರೇಕ್ಷಕರ ಎದುರು ಜೀವಂತ ನಿಂತಂತೆ.ಅದೆಂತದೋ ಹುಚ್ಚು ಕಾಟ  ಈ ಅಜ್ಜಂದು.ಮೌಲ್ಯಗಳು ಕುಸಿದಾಗ ಕಣ್  ಎದುರು ಬರುತ್ತಾನೆ.ಹಾಗಂತ ಅತಿಯಾಗಿ ಮಾಡಿಕೊಂಡು ಹೊರಟಾಗ ಎಚ್ಚರಿಕೆಯ ಗಂಟೆಯಂತೆ ನೆನಪಾಗ್ತಾನೆ.ಯಾವುದು ಬೇಡ ಅಂದುಕೊಳ್ಳುತ್ತಿದಾಗೆ ಕೋಲು ಹಿಡಿದು ಬಡಿದ್ದೆಬಿಸುತ್ತಾನೆ.
*
ಈ ಸಾದಿಕ್ ಅಜ್ಜ ನನ್ನೂರಿನವನು! ಅಪ್ಪ ಅಮ್ಮನ ಊರನ್ನ ನನ್ನದಲ್ಲದ ಊರನ್ನ ನನ್ನದು ಅನ್ನೋದಕ್ಕೆ ಸ್ವಾಭಿಮಾನ ಅಡಚಣಿಸಿದರು ಅನಾಯಾಸವಾಗಿ ಬಂದು ಬಿಡುವುದು."Home is where your heart lies" ಅನ್ನೋ ನಾಣ್ನುಡಿ ಒಮ್ಮೆ ಸಮಾದಾನಿಸಿದರು ನನ್ನ ಅಸ್ತಿತ್ವವ ಉಲ್ಲೇಕಿಸದ ನನ್ನ ಸಂಪೂರ್ಣ ಒಡನಾಟದ ಪರಿಚಯವಿಲ್ಲದ ಊರು ನನ್ನದೇಗೆ ಅನಿಸುವುದು ಉಂಟು.ಹಾಗೆ ಪರಿಗಣಿಸಿದರೆ ಬೃಹತ್ ಬೆಂಗಳೂರು ಸಹ ಅಷ್ಟೇ ತೂಕದ ಅನಾಮಿಕತನ ಪ್ರದರ್ಶಿಸುತ್ತೆ ನನ್ನ ಪಾಲಿಗೆ ನನ್ನಂತ ಅನೇಕರ ಪಾಲಿಗೆ.ನಾನು ಹುಟ್ಟಿದ್ದು ಓದಿದ್ದು ಬೆಳೆದಿದ್ದು ಆಡಿದ್ದು ಸೈಕಲ್ ಯಾನ ನಡೆಸಿದ್ದು ಕನಸು ಚಿಗುರೊಡೆದಿದ್ದು ಕಡೆಗೆ ಅವುಗಳು ನನಸಾಗುವುದು ಬೆಂಗಳೂರಲ್ಲೇ ನಾನು ಪ್ರೀತಿಸಿದ್ದು ಬೆಂಗಳೂರನ್ನೇ ಆದರೂ  ಮೈಕೆಸರು ಮಾಡಿ ದಿನವಿಡೀ ನಲಿದ್ದಿದ್ದು ಹೊಳೆಯಲ್ಲಿ ಮಿಂದಿದ್ದು ಕಾಡು ಬೇಧಿಸಿದ್ದು ಕೆಂಡ ಹಾರಿ ಕಾಲು ಸುಟ್ಟಿಕೊಂಡಿದ್ದು ಹುಲ್ಲು ಹಾಸೀನ ಬಯಲಲ್ಲಿ ರಾತ್ರಿಯಿಡಿ ನಕ್ಷತ್ರ ಎಣಿಸುತ್ತ ಹರಟೆ ಹೊಡೆದು ಮಲಗಿ ಪ್ರಕೃತಿಗೆ ಹತ್ತಿರವಾದದ್ದು ಮನಸು ಆಳಾವಾಗಿ ಬೇರೂರಿರುವುದು ಮಾತ್ರ ಹಳ್ಳಿಯಲ್ಲಿ.ಅಷ್ಟರ ಮಟ್ಟಗಿನ  ಹೈಬ್ರಿಡ್ ಸಂತತಿಯವಳು ನಾನು.ಮತ್ತೆ ಈ ಸಾದಿಕ್ ಅಜ್ಜನ  ಭೇಟಿ ಆದದ್ದು ಕೂಡ ಊರಿನ ಅಂತದ್ದೊಂದು ದಟ್ಟ ಬಯಲಿನ ಹಸಿರು ಜಗಲಿಯಲ್ಲಿ.ಮೊದಲ ನೋಟದಲ್ಲೇ ತೀರ ಪರಿಚಯಸ್ತನಂತೆ ಕಂಡಿದ್ದ ಅಜ್ಜ.

ಚಿತ್ರಕೃಪೆ:ಮದನ್ ಕುಮಾರ್


ನಾನು ಅಣ್ಣ ಮಾವನ ಮಕ್ಕಳು ಬೇಸಿಗೆಯ ಸಂಜೆ ಆರ ಕ್ಕೆಲ್ಲ ಊಟ ಮುಗಿಸಿ ಮಿಣು ಮಿಣು ಮಿಂಚುತ್ತಿದ್ದ ಮಿಂಚುಳದ ಬೆನ್ನತ್ತಿ ಬಯಲಿನೆಡೆಗೆ ಹೊರಟು ಬಿಡುತ್ತಿದ್ದೆವು.ಕಾಳಿ ದೇವಸ್ಥಾನದ ಬಳಿಯಿದ್ದ ವಿಶಾಲ ಬಯಲಿನಲ್ಲಿ ಆಕಾಶ ನೋಡುತ್ತಾ ಮಲಗಿರುತ್ತಿದ್ದ ಸಾದಿಕ್ ಅಜ್ಜನ ಪಕ್ಕ ಹೋಗಿ "ಏನಜ್ಜ ನೀನು ನಮ್ ಹಾಗೆ ಮೇಲೆ ನೋಡ್ತಾ ಮಲಗಿದ್ದ?ನಿಂಗೊತ್ತಾ ಬೆಂಗಳೂರಿನ ಬಾನೇ ಬೇರೆ ಇಲ್ಲಿಯ ಬಾನೆ ಬೇರೆ.ಅಲ್ಲಿನ ನಕ್ಷತ್ರಗಳೇ ಬೇರೆ ಇಲ್ಲಿನವೇ ಬೇರೆ"ಅಂತ ಏನೇನೋ ಆ  ವಯಸಿನಲ್ಲಿ ನಮಗೆ ಗೋಚರಿಸುತ್ತಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನ ಕೌತುಕಗಳನೆಲ್ಲಾ  ಎಳೆದು ಎಳೆದು ರೆಕ್ಕೆ ಪುಕ್ಕ ಹಚ್ಚಿ ಆತನ ಕಿವಿ ತುಂಬುತ್ತಿದ್ದೆವು.ಅದನ್ನೆಲ್ಲಾ ಚೂರು ಚಿಟಿಕ್ ಪಿಟಿಕ್ ಅನ್ನದೆ ಬೆರಗುಗಣ್ಣಿನಿಂದ ಆಲಿಸಿ ತನ್ನ ಕಪ್ಪು ಮಿಶ್ರಿತ ಬಿಳಿ ಉದ್ದದ ಗಡ್ಡ ಸವರಿಕೊಳ್ಳುತ್ತಾ"ಹೌದ ಬಚ್ಚಾ?!" ಎಂದು ರಾಗವೆಳೆದು ನಸುನಗುತ್ತಿದ್ದ.

ಸಾದಿಕ್ ಅಜ್ಜ ಸಾಂಪ್ರದಾಯಿಕ ಮುಸ್ಲಿಂ  ಜನಾಂಗದವನು.ಊರಿನಲ್ಲಿ ಅಲ್ಪಸಂಖ್ಯಾತರ ಒಕ್ಕಲು ಬೆರೆಳೆಣಿಕೆ ಅಷ್ಟಿದ್ದವು.ಸಾದಿಕ್ ಅಜ್ಜ ಮುಸಲ್ಮಾನನಾಗಿ ಹುಟ್ಟಿ ಮುಸುಲ್ಮಾನಾಗೆ ಸತ್ತರೂ ಬದುಕ್ಕಿದ್ದಷ್ಟು ದಿನ ಮುಸಲ್ಮಾನನು ಆಗದೆ ಹಿಂದುವು  ಆಗದೆ ಕೇವಲ ಮನುಷ್ಯನಾಗೆ ಉಳಿದಿದ್ದ.ಅದು ಒಂದು ರೀತಿ ಆತನಿಗಿದ್ದ ಅನಿವಾರ್ಯತೆಯೂ ಹೌದು ಹಾಗೆ ಅವನಿಗೆ ಅಂಟಿಕೊಂಡಿದ್ದ ಆದರ್ಶವು ಹೌದು ಆತ ಲಾಲಿಸಿ ಪಲಿಸಿಕೊಂಡಿದ್ದ ಮನುಷ್ಯತ್ವ ಮೌಲ್ಯವನ್ನೊಳಗೊಂಡ  ಜೀವನಕ್ರಮವು ಹೌದು. ಯೌವನದಲ್ಲೇ ಹೆಂಡತಿ ಕಳೆದುಕೊಂಡ ಸಾದಿಕ್ ಅಜ್ಜ ಮರು ಮದುವೆ ಆಗದೆ ಅರ್ಧಂಬರ್ದ ಬ್ರಹ್ಮಚಾರಿಯಾಗಿ ಹೋಗಿದ್ದ.ಒಬ್ಬಂಟಿ ಅಜ್ಜನಿಗೆ ಒಡ ಹುಟ್ಟಿದವರು ದಾಯಾದಿ ಎನಿಸಿಕೊಂಡವರು ಆತನಿಗಾಗಿ ಚಡಪಡಿಸುವವರು ಯಾರು ಇರಲಿಲ್ಲ.ಇದ್ದರೂ ಅವರ ಸುಳಿವು  ಊರಿನವರಿಗಿರಲಿಲ್ಲ ಪಾಪ ಅಜ್ಜನಿಗೂ ಇರಲಿಲ್ಲವೇನೋ ಹಾಗಾಗೆ ಅದಕ್ಕೂ  ಇದಕ್ಕೂ  ಎಲ್ಲದಕ್ಕೂ ಆತ ಊರಿನವರನ್ನೇ ಹಚ್ಚಿಕೊಂಡು ಅವರಿಗಾಗೇ ಬದುಕ್ಕಿದವ.ಯಾರ ಹೆಣಕ್ಕಾದರು ಹೆಗಲು ಕೊಡುತ್ತಿದ್ದವ.ಅದರಲ್ಲೂ ಬದುಕಿದ್ದ ಹೆಣಗಳೇ ಹೆಚ್ಚಿನವು.ಅಲ್ಲಿಲ್ಲಿ ತೋಟದ ಕೆಲಸ ಮದುವೆ ಕೆಲಸ ಹೆಣ  ಸುಡೋಕೆ ಕಟ್ಟಿಗೆ ಕೂಡಿಸೋ ಕೆಲಸ ಹೀಗೆ ಅವನೇ ಕೊನೆಯ ಆಧಾರವೆನ್ನುವಂತೆ ಅರಸಿಕೊಂಡು  ಬರುತ್ತಿದ್ದವರು ಹಚ್ಚುತ್ತಿದ್ದ ಎಲ್ಲ ಕೆಲಸಗಳನ್ನು ಬಿಡಿಗಾಸು ಅಪೇಕ್ಷಿಸದೆ ಬೇಸರಿಸದೆ ಮಾಡುತ್ತಿದ್ದನೆಂದು ಅಮ್ಮನಲ್ಲಿ ಮಾವ ಆಗಾಗ ಹೇಳುತ್ತಿದ್ದರು.ಕಾಳಿ ಮಂದಿರ ಕಟ್ಟುವಾಗ ಆಳು ಮಕ್ಕಳ ಮುಖ್ಯಸ್ಥನನ್ನಾಗಿ ಇವನನ್ನೇ ನೇಮಕ ಮಾಡಿದ್ದರಂತೆ.ಅಂದಿನಿಂದ ಕಾಳಿ ಮಂದಿರ ಪಕ್ಕದಲ್ಲೇ ಒಂದು ಪುಟ್ಟ ಹೆಂಚಿನ  ಮನೆ ನಿರ್ಮಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ  ಅಜ್ಜ.

ಅಜ್ಜ ನಾವು ಮಕ್ಕಳಿಗೂ ಅಷ್ಟೇ ಪ್ರೀತಿಪಾತ್ರನಾಗಿದ್ದ.ಅದರಲ್ಲೂ ನನಗೆ ಅಜ್ಜನಲ್ಲಿ ವಿಶೇಷ ಪ್ರೀತಿ.ಆ ಕಾಲದಲ್ಲಿ ಚಿಕ್ಕವರಿಂದ ಹಿಡಿದು ಮುತ್ತೈದೆಯಾಗಿ ಸಾಯದ ನನ್ನ ಅಜ್ಜಿಯ ಹಣೆಯಲ್ಲೂ  ರಾರಾಜಿಸುತ್ತಿದ್ದ ಗಂಧ ಅಂದರೆ ಏನೋ ಆಕರ್ಷಣೆ ಗೌರವ.ಗಂಧದ ಘಮಲು ಅಂದರೆ ಪಂಚಪ್ರಾಣವಾಗಿದ್ದ ನನಗೆ ಗಂಧದ ಕೊರಡು ತಂದು ಕೊಟ್ಟಿದ್ದ ಅಜ್ಜ.ದಪ್ಪ ಮೀಸೆ ವೀರಪ್ಪನ್ ಊರಿನಾಚೆ ಬೆಟ್ಟದ ಕಾಡಿನಲ್ಲಿ ನಿಗೂಢವಾಗಿ ಬೀಡು ಬಿಟ್ಟಿದ್ದಾನೆನ್ನುವ ಬಿಸಿ ಬಿಸಿ ಸುದ್ದಿ ಗೌಪ್ಯವಾಗಿ ಹಬ್ಬಿದ್ದ ದಿನಗಳವು.ಅಂತಹ ಪರಿಸ್ಥಿಯಲ್ಲೂ ಕಾಡಿನೊಳಕ್ಕೆ ಹೋಗುವ ನಮ್ಮ ಅಭಿಲಾಷೆಗೆ ನೀರೆರಚದೆ ಪೂರಕವಾಗಿ ಸೂತ್ರ ಬಿಗಿದು ಹಾರಿಸಿದವನು ಸಾದಿಕ್ ಅಜ್ಜ.ಗುಡ್ಡ ಚಾರಣಕ್ಕೆ ಅವನು ಒಂದು ಕೈಯಲ್ಲಿ ಕೊಲಿಡಿದು ಇನ್ನೊಂದು ಕೈಯಲ್ಲಿ ಒಣಗಿದ ಮುಳ್ಳು ಗಿಡಗಳ ಕಡೆಯಲು ಕತ್ತಿ ಹಿಡಿದು ನಮ್ಮ ದಾರಿಯಾಗಿ ಬುಡು ಬುಡು ಎಂದು ದಾಪುಗಾಲಿಟ್ಟು  ಮುನ್ನುಗ್ಗುತ್ತಿದ್ದರೆ  ಅವನಿಂದೆ ಕಲ್ಲು ಮುಳ್ಳಿನ ದಾರಿಯಲ್ಲಿ  ಟುಮು ಟುಮು ಹೆಜ್ಜೆ ಸಪ್ಪಳಿಸಿ ಓಡುತ್ತ ನೋಡ ಸಿಗುತ್ತಿದ್ದ ನವಿಲು ಮೂಲ ಉಡಗಳ ಜೊತೆಗಿಷ್ಟು ಕ್ಷೇಮ ಕುಶಲೋಪಚಾರಿಯ ಮಾತುಗಳನ್ನಾಡಿ ವನದೇವಿಯ ಅಪರೂಪದ ಪ್ರೀತಿ ಸೌಂದರ್ಯ ಸವಿಯುತ್ತಿದೆವು.ಅಲ್ಲಿಂದ ಬರುವಾಗ ಆಯಾಸವೆಂದವರನ್ನ  ಸರದಿ ಮೆರಿಗೆ ಭುಜದ ಮೇಲೇರಿಸಿಕೊಂಡು,ನಡೆಯುತ್ತಿದ್ದವರ ಉದ್ದೇಶಿಸಿ  "ಹುಷಾರ್ ಬಚ್ಚೋ ನಿಮ್ಮ ಮುದ್ದು ಬಿಳಿ ಕಾಲಿನ ಅಡಿ ಕೆಂಪಾದವು ನೋಡ್ಕೊಂಡ್ ನಡೀರಿ"ಅಂತೇಳಿ ಹೇಳಿನೆ ಸುಸ್ತಾಗುತ್ತಿದ್ದ ಸಾದಿಕಜ್ಜ.   
*
"ಇಡೀ ಊರಿನ ಜವಾಬ್ದಾರಿಯನ್ನ ಅವನೇ ತಲೆ ಮೇಲೆ ಹೊತ್ತಂತೆ ಕೆಲಸ ಮಾಡುತ್ತೆ ಸಾದಿಕಣ್ಣ.ಕೊನೆ ದಿನಗಳಲ್ಲಿ ಇವನ ಹೊರೋಕೆ ಅದ್ಯಾವ ಜನ ಬರುತ್ತಾರೋ ನೋಡಬೇಕು.ಎಲ್ಲಾ ಅವಕಾಶವಾದಿಗಳು ಹಿಂದು ಮುಂದು ಇಲ್ಲದ ಮುದುಕನನ್ನ ಮುಗಿ ಬಿದ್ದು ಉಪಯೋಗಿಸಿಕೊಳ್ಳುತ್ತಿದ್ದಾರೆ" ಅಂತ ಮಾವ ಶಕುನದ ಹಕ್ಕಿಯಂತೆ ಯಾವಾಗಲು ಉಚ್ಚರಿಸುತ್ತಿದ್ದ  ದಿನಗಳು ಸಾದಿಕಜ್ಜನಿಗೆ  ಬಂದೆರೆಗಿತು.ಆತನ ಋಣಕ್ಕೆ ಬಿದ್ದಿದ್ದವರಿಗೆಲ್ಲಾ  ಅಜ್ಜ  ಮುಸಲ್ಮಾನ್ ಎಂಬುದು ನೆನಪಾದದ್ದು ಆವಾಗಲೇ... ಅವನು ಹಾಸಿಗೆ ಹಿಡಿದಾಗಲೇ.... ಅವನ  ಆರೈಕೆ ಯಾರು ಮಾಡಬೇಕೆಂಬ ಪ್ರಶ್ನೆ ಎದ್ದಾಗಲೇ! ಅಜ್ಜನ ಕಾಳಜಿ ಮಾಡುವುದ ಮರೆತು ಇಂತಹ ಚರ್ಚೆಗಳ ನಡೆಸಿ ಅಜ್ಜನ ಮುಗ್ದ ಮನಕ್ಕೆ ಮೊಳೆ ಹೊಡೆದಿದ್ದರು.ಇನ್ನೂ,ಅಜ್ಜನ ಆಪ್ತರೆನಿಸಿಕೊಂಡ ಊರಿನ  ಮೂರು ಮತ್ತೊಂದು ಮುಸಲ್ಮಾನರು, ಜೀವನಪರ್ಯಂತ ನಮ್ಮ ಧರ್ಮವ ಕಡೆಗಣಿಸಿ ಹಿಂದೂಗಳ ಕೈಗೊಂಬೆಯಂತಿದ್ದ ಬೇಕಾದರೆ ಅವರಿಂದಲೇ ಚಾಕರಿ ಮಾಡಿಸಿಕೊಳ್ಳಲ್ಲಿ  ಅಂತ ಮೂಗು ಮುರಿದು, ಶೂಲಕ್ಕೇರಿಸಿ ಬಿಟ್ಟರು.ಅದರ ಪರಿಣಾಮವೆಂಬಂತೆ  ಅಜ್ಜನ ದೇಹದೊಡನೆ  ಮನಸೂ  ಕುಗ್ಗಿತು.

ಹೀಗೆ ಮಲಗಿದ್ದ ಅಜ್ಜನಿಗೆ ಕಾಳಿ ದೇವಸ್ಥಾನ ಪೂಜಾರಿ ಮಗ,ಹರೀಶ ಕೆಲವೊಮ್ಮೆ ನನ್ನ ಮಾವ ಗಂಜಿ ಕೊಟ್ಟು ಬರುತ್ತಿದ್ದರಂತೆ.ಅದೊಂದು ದಿನ ಊರಿಗೆ ಹೋದಾಗ ಗಂಜಿ ಕೊಟ್ಟು ಬರುತ್ತೀನೆಂದು ಹೋದ ನನಗೆ ಕೋಣೆಯ ಮೊಲೆಯಲ್ಲಿ ಮುದುರಿ ಮಲಗಿದ್ದ  ಮಗುಮನಸಿನ ಅಜ್ಜನ ಕಣ್ಣುಗಳಲ್ಲಿ ಎಂದಿನಂತ ಜೀವಂತಿಕೆ ಆಪ್ತತೆ ಕಾಣಲಿಲ್ಲ.ಪಾಪ ಬಿದ್ದಲ್ಲೇ ಬಿದ್ದ ಅಜ್ಜನ ಗಡ್ಡ ಕೂದಲಿನಲ್ಲಿ ಹೇನು ಹರಿದಾಡುತ್ತಿದ್ದವು.ಅದೆಷ್ಟೂ ಹಿಂಸೆ ಅನುಭವಿಸಿದ್ದನೋ."ಅಜ್ಜ ಗಂಜಿ ತಂದಿದ್ದೀನಿ ತಿಂದು ಮಲಗು ಹಾಗೆ ಗಡ್ಡ ಬೋಳಿಸಜ್ಜ ನಾನು ಮಾವನಿಗೆ ಹೇಳಲಾ?" ಅಂದಿದ್ದೆ ತಡ ಇಟ್ಟಿದ್ದ ಊಟದ ಡಬ್ಬಿಯನ್ನ ತಳ್ಳಿ "ಹೋಗು ಬಚ್ಚ ನೀನಿಲ್ಲಿಂದ ವಿನಾಕಾರಣ ಯಾರನ್ನು ಕನಿಕರಿಸಬೇಡ ನಡಿ ನಡಿ" ಅಂದು ಕೊಲಿಂದ ಆಚೆ ಅಟ್ಟಿಬಿಟ್ಟ .ಅಜ್ಜನ ಹುಚ್ಚು ವರ್ತನೆ ನೋಡಿ ಒಂದು ಕ್ಷಣ ದಿಗ್ಭ್ರಂತಳಾದೆ.ಕೋಪ ಬಿಕ್ಕಳಿಕೆ ಎರಡು ಒಟ್ಟೊಟ್ಟಿಗೆ ಉಕ್ಕಿ ಬಂದು ಮುಖ ತಿರುಗಿಸಿ ಹೋಗುತ್ತಿದ್ದವಳಿಗೆ ಕರಳು ಕಿವಿಚಿ ಮತ್ತೆ ಹಿಂದಿರುಗಿದಾಗಲೇ ಮರೆಯಲ್ಲಿ ಮಲಗಿದ್ದ ಅಜ್ಜನ ದೀನ ಕಣ್ಣಾಲಿಗಳಿಂದ ಹನಿ ನೀರು ಜಾರಿದ್ದ ಕಂಡಿದ್ದು. ಬದುಕು ಆತನಿಗೆ ಕಲಿಸಿದ ಪಾಠವ  ಯಾರಿಗೋ ರವಾನಿಸಿದ ತೃಪ್ತ ಭಾವದೊಂದಿಗೆ ಶೂನ್ಯ ದತ್ತ ನೋಡುತ್ತಾ ಮಲಗಿದ್ದ.ಅದ್ಯಾವುದು  ನನಗಂದು ಅರ್ಥವಾಗಲೇ ಇಲ್ಲ.ಅವನ ಮುಖದೆಡೆಗೆ ಹರಿಯುತ್ತಿದ್ದ ಹೇನಿನ ಸೈನ್ಯ ಅವನಿದ್ದ ಚಿಂತಾಜನಕ ಸ್ಥಿತಿ ಕಂಡು ಇದ್ದ ಕೋಪ ನುಣುಚಿ ಸಂಕಟ ತುಂಬಿಕೊಂಡು ಮನೆ ಕಡೆ ನಡೆದೆ.

ಇದೆಲ್ಲ ಆಗಿ ವರುಷಗಳೆ  ಉರಿಳಿದ್ದಾವೆ.ಆತ ಕೊಟ್ಟಿದ್ದ ಗಂಧದ ಕೊರಡು ಸವಿದು ಸವಿದು ನನ್ನ ಮನ ತಣಿಸಿ ಹಣೆ ತುಂಬಿಸಿ ತಾನು ದಿನೇ ದಿನೇ ತೆಳ್ಳಗಾಗುತ್ತಿದ್ದೆ.ಅಜ್ಜನ ಅಂದಿನ ಭಾವದ ಸಿಕ್ಕುಗಳನ್ನ ಬಿಡುಸುವಲ್ಲಿ ನಾನಿಂದು ಸಫಲಳಾಗಿದೇನೆ.ಈಗ ಅವನ ನೆನಪಾಗಿ ಉಳಿದಿರುವ ಕೊರಡನ್ನ  ಇನ್ನಷ್ಟು ಸವಿಸಲು ಹೃದಯ ಒಪ್ಪುತ್ತಿಲ್ಲ.ಅದು ಮೇಜಿನ ಡ್ರಾಯರ್ ಒಳಗೆ ತನ್ನ ಗಟ್ಟಿ ಸ್ಥಾನ ಕಾತರಿ ಪಡಿಸಿಕೊಂಡಿದೆಯಾದರು ಸವಿಯಲು ಘಮ ಸೂಸಲು ಹಾತೊರೆಯುತ್ತಿದ್ದಂತಿದೆ.ಯಾರನ್ನು ಕನಿಕರಿಸ ಬೇಡ ಅನ್ನುತ್ತಲೇ ನನ್ನ ಕನಿಕರಿಸಿದ ಅಜ್ಜ ಇವತ್ತಿಗೂ ನನ್ನಲ್ಲಿ  ಆಗಾಗ ಜೀವಂತವಾಗುತ್ತಾನೆ,ಎದ್ದು ನಿಲ್ಲುತ್ತಾನೆ,ಕೊಲಿಡಿದು ಅಟ್ಟುತ್ತಾನೆ!

Saturday, November 3, 2012

ಸಾವಿಲ್ಲದ್ದು

ನನ್ನ ಹುಟ್ಟು ತುಂಬಾ ನಿರೀಕ್ಷಿತವಾದದ್ದು,ಆದರೆ ಯಾವ ಆದರದ ಸ್ವಾಗತವು ಅದರ ಪಾಲಿಗಿರಲಿಲ್ಲ!

ಸ್ವಾಗತದ ವೈಭವವೇನು ಬೇಕಿರಲಿಲ್ಲ, ನಾನುಟ್ಟಿದ್ದು ಇವರಿಗೆ ಗೋಚರಿಸಿದರೆ ಸಾಕಿತ್ತು ಅಂದೆನಗೆ!

ಯಾಕಂದರೆ ನನಗೂ  ಮನವರಿಕೆಯಾಗಿತ್ತು...... ಅವಳ ಕೊಂದು ನಾನು ಹುಟ್ಟಿದ್ದೆನಂತ!

ಆದರಿಂದಲೋ ಏನೋ ನಾ ಹುಟ್ಟಿದ ಗಳಿಗೆಯಿಂದಲೂ  ಕೇಳಿದ್ದು ಬರಿ ಅಕ್ರಂದನವೇ......

ಆದರೆ ನಾನೇನು ಮಾಡಲಿ...........ವಿಧಿ ನಿಯಮವೇ ಹಾಗಿರುವಾಗ?

ಅವಳಿರುವಾಗಲೇ  ನಾನು ಹುಟ್ಟುವಂತಿರಲಿಲ್ಲ!

ನಾ  ಬರೆಸಿ ಕೊಂಡು ಬಂದ ಭಾಗ್ಯವೇ ಇಷ್ಟು,ಅಂತ ಬೇಜಾರಾಗುತ್ತಿತ್ತು  ಒಮ್ಮೊಮ್ಮೆ!

ಅಂದು ಎಲ್ಲರೂ ಕೂಗಿ ಕೂಗಿ ನನ್ನ ಹುಟ್ಟನ್ನು ಶಪಿಸುತ್ತಿದ್ದಾಗ  ನನಗೂ  ಜೋರು ಅಳು ಬರುತಿತ್ತು....

ಆದರೆ ನಾನವಳoತಲ್ಲ! ಹುಟ್ಟಿದಾಕ್ಷಣ ಹಾಗೆಲ್ಲ ರಂಪ ರಾಮಾಯಣ ಮಾಡುವುದನ್ನ ವ್ಯರ್ಥ ಪ್ರಲಾಪಗಳ ನಡೆಸುವುದನ್ನ ಮೈಗೂಡಿಸಿಕೊಂಡವಳಲ್ಲ!

ನನ್ನ ಕಂಡರೆ ಇಲ್ಯಾರಿಗೂ ಆಗುತ್ತಿರಲಿಲ್ಲ! ಆಗಾಗ ಹೋದವಳ ನೆನಪಿಸಿಕೊಂಡು ಅಳ್ತಿದ್ರು.....

ಈ ತಾರತಮ್ಯದ ಗಾಳಿ ಹೆಚ್ಚಿದಂಗು ನನ್ನ ಉದರದಲಿನ ಬೆಂಕಿ ಧಗ ಧಗಿಸಿ ಉರಿಯುತ್ತಿತ್ತು!

ಆದರು ಉಸಿರೆತ್ತಲಿಲ್ಲ...ನೋವನ್ನು ಪ್ರದರ್ಶನಕ್ಕಿಡುವ ವ್ಯಕ್ತಿತ್ವ ನನ್ನದಾಗಿರಲಿಲ್ಲ... ನಾನವಳoತಲ್ಲ!

ದಿನ ಕಳೆದಂಗು ನಾನಿವರೆಲ್ಲರ ನೆನಪಿನಿಂದ ಮರೆಯಾಗುತ್ತಿದ್ದೆ....ಅವಳಿನ್ನು ಕೆಲವರ ಮನಸಿನಲಿ ತಣ್ಣಗೆ ಹಾಸಿಕೊಂಡು ಮಲಗಿದ್ದಳು!

ನನಗೀಗೆಲ್ಲ ಅಭ್ಯಾಸವಾಗಿ ಹೋಗಿದೆ ಮೊದಲಿನಂತೆ ಕೀಳರಿಮೆ ಕಾಡೋದಿಲ್ಲ..... ಜಿಗುಪ್ಸೆಯೂ ಮೂಡೋದಿಲ್ಲ...

ಎಲ್ಲಾ ಪಡೆದ ಅವಳು ಸಾಧಿಸಿದ್ದು ಕೆಲ ದಿನದ ಅವಳೆಸರಿನ ಸಂತಾಪದ ಕನವರಿಕೆಗಳನ್ನ...

ಯಾವುದನ್ನೂ ಪಡೆಯದ ನಾನು ನಿತ್ಯ ಸಂತಾಪದ ಸುಳಿಯಲ್ಲಿ ಸಿಕ್ಕಿ ಹುಟ್ಟಿನಿಂದಲೂ ಸತ್ತಂತ್ತಿದ್ದರು ಸಾಯದೆ ಉಳಿದ್ದಿದ್ದೆ ನನ್ನ  ಸಾಧನೆ!

ಇಂತಿ
ಮರಣ

Friday, November 2, 2012

"..........................


ಬೆಳಂಬೆಳಗೆ ನಿತ್ಯದ ಸ್ನಾನ ಕರ್ಮಾದಿಗಳ ಮುಗಿಸಿ ನನ್ನ ಕೋಣೆಗೆ ತಡವರಿಸಿ  ಹೆಜ್ಜೆಯನಿಡುತಿದ್ದಾಗ "ಬಿಸಿ ಬಿಸಿ ನೀರು ಹೊಯ್ಯಿಸ್ಕೊಂಡು  ಸುಸ್ತಾಗಿರುತ್ತೆ ಮೇಜಿನ ಮೇಲೆ ಹಾಲಿಟ್ಟಿದೀನಿ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ತಯ್ಯಾರಾಗು.ಇನ್ನು ಸಮಯವಿದೆ ಹತ್ತು ಗಂಟೆ ನಂತರವೇ ಪ್ರಶಸ್ತ ಮೂಹುರ್ತವಿರೋದು ಅಂದಿದ್ದಾರೆ  ಭಟ್ರು"ಅಮ್ಮ ಎಂದಿನ ಕಾಳಜಿ ಸ್ವರದಲ್ಲಿ  ಕೂಗಿ ಹೇಳಿದಳು.ಕನ್ನಡಿ ಬಳಿಯ ಕಿಟಕಿಯ ಒಳ ಹೊಕ್ಕುತಿದ್ದ ಸೂರ್ಯೋದಯದ ಎಳೆ  ಬಿಸಿಲ ಕಿರಣಗಳು ಮೈಯ್ಯ ತಾಕುತ್ತಿದ್ದಂತೆ ಮೊದ ಮೊದಲು ಹೆಣ್ಣಾದ ಸವಿ ಗಳಿಗೆಯ ನೆನಪು ಮರುಕಳಿಸಿ ನಾಚಿಕೆ ಉಕ್ಕಿದಂತಾಯ್ತು .ಕಿಟಕಿ ಪರದೆಯ ಸಂದಿಯಿಂದ ಇಣುಕುತ್ತಿದ್ದ ಸ್ನಿಗ್ದ ಬೆಳಕಿನ ನಡುವೆ ನನ್ನನ್ನು ನಾನೇ ಕನ್ನಡಿಯಲ್ಲಿ ನೋಡುತ್ತಾ ಹೊಟ್ಟೆಯ ನೆವರಿಸಿಕೊಂಡೆ.

ನಾ ತೊಟ್ಟಿದ್ದ ಅಣ್ಣ ಉಡುಗೊರೆಯಾಗಿ ಕೊಟ್ಟ  ಹಸಿರು ಸೆರಗಿನ ಕೆಂಪು ಬಣ್ಣದ ಸೀರೆಯು ಅರಳಿದ ಮೊಗದೊಡನೆ ಸ್ಪರ್ಧೆಗಿಳಿದು ಅದರ ರಂಗೆಚ್ಚಿಸಿ ಕಂಗೊಳಿಸುವಂತೆ ಮಾಡಿತು.ಸೀರೆಯುಡುವ ಬಗ್ಗೆ ಅಸಡ್ಡೆ ಧೋರಣೆ ತಾಳಿದ್ದ  ನಾನು ಈ ನಡುವೆ ಅದರ ವ್ಯಾಮೋಹ  ಹೆಚ್ಚಿಸಿಕೊಂಡು ದಿನಲೂ  ಅವನ್ನೇ ಬಯಸಿ ದರಿಸುವುದು ಪರಿಪಾಟಲಾಗಿದೆ.ತಿಂಗಳು ಕಳೆದಂತೆಲ್ಲಾ ಸೀರೆಯ ನೆರಿಗೆ ಕಮ್ಮಿಯಾಗುತ್ತಿದ್ದರೆ ಏನೋ ಒಂದು ತರನಾದ ಹೊಸ ಬಗೆಯ ಪುಳಕ ಕಾತುರ.ಜೀವನಶೈಲಿಯಲ್ಲೂ ಯೋಚನಾ ಲಹರಿಯಲ್ಲೂ ಅನೇಕಾನೇಕ ಬದಲಾವಣೆಗಳು.ನವ ಅತಿಥಿಯ ಸ್ವಾಗತಕ್ಕೆ ಮನಸಿನ ಆವರಣವು  ಬಗೆ ಬಗೆಯ ಹೂವಿನ ಹಾಸು ಹಾಸಿಕೊಂಡು ಸಜ್ಜಾಗಿದೆ."ಆಯ್ತಾ? ಯಾರನಾದ್ರು ಸಹಾಯಕ್ಕೆ ಕಳಿಸ್ಲ ?"ಕೇಳಿದಳು ಅಮ್ಮ."ಯಾರು ಬೇಡಮ್ಮ ಐದು ನಿಮಿಷ ಇಗೋ ನಾನೆ ಬಂದೆ"ಅನ್ನುತ್ತಾ ಕೋಣೆಯ ಗೋಡೆಗಳಿಗೆ ನೇತು ಹಾಕಿಕೊಂಡ ಬಾಯಲ್ಲಿ ಬೆರಳಿಟ್ಟು ಮಲಗಿದ್ದ ಹಸುಗೂಸು,ಅಂಬೆಗಾಲೂರಿ ನಿಂತ ಕಂದಮ್ಮ,ಕಿವಿ ಎಳೆದಾಡಿಕೊಳ್ಳುತಿದ್ದ ಅವಳಿ ಮಕ್ಕಳು,ತುಂಬು ಹಾಲ್ಗೆನ್ನೆಯ ಹೊತ್ತು ವಿವಿಧ ಭಂಗಿಯಲ್ಲಿ ಮನಸೂರೆಗೊಳಿಸುತ್ತಿದ್ದ ಕಿನ್ನರ ಸಮೂಹ ಮೊದಲಾದ ಚಿತ್ತಾಕರ್ಷಕ ಚಿತ್ರ ಪಟಗಳನ್ನ ತೆಗೆದು ಮೂಲೆಯಲ್ಲಿ ಜೋಡಿಸಿಟ್ಟೆ.ಇನ್ಮೆಲೆನಿದ್ದರು ನನ್ನ ಮುದ್ದುವಿನ ಮುದ್ದಾದ ಚಿತ್ರ ಪಟಗಳೇ  ಈ  ಕೋಣೆಯ  ಅಲಂಕರಿಸಬೇಕನ್ನೋ ಸಿಹಿ ಸ್ವಾರ್ಥ ನನ್ನದು.
ಚಿತ್ರಕೃಪೆ:ಮದನ್ ಕುಮಾರ್

ನವಮಾಸ ಕಳಿತೆಂಬ ಗಡಿಬಿಡಿ ಅವಸರವಿದ್ದರು ಅಚ್ಚುಕಟ್ಟಾಗಿ ವಿಜೃoಭಣೆಯಿಂದ ಸೀಮಂತ ಮಾಡಿ ಮುಗಿಸಿದ ಸಂಭ್ರಮದಲ್ಲಿದ್ದರು ಮನೆಯವರು. ನನಗೇಕೋ ಅಸಮದಾನ ಆತಂಕ.ಮುದ್ದು ಪ್ರತಿ ಸಲ ಕೈ ಕಾಲಾಡಿಸಿ ಒದ್ದಂತಾದಾಗ  ಅಪೂರ್ವವಾದ ಸಿಂಚನ ನರನಾಡಿಗಳಲ್ಲರಿದ ಅನುಭವವಾಗುತ್ತಿತ್ತು ಇಂದೇಕೋ ಬೆಳಗಿನಿಂದ ಒಂದು ಸಲವೂ ಮುದ್ದುವಿನ ಚಲನದ ಮಧುರ ಅನುಭೂತಿಯಾಗದಿದ್ದದ್ದು  ಹೃದಯವನ್ನು ಸಣ್ಣದಾಗಿ ಹಿಂಡಿ  ಹಿಪ್ಪೆಯಾಗಿಸಿತು.ಗಾಬರಿ ಉದ್ವೇಗದಿಂದಲೇ ಕೈಯಾ ಹೊಟ್ಟೆಯ ಮೇಲೆ ಸರಿಸಿ ಮೃದುವಾಗಿ ಮುಟ್ಟಿದೆ.ಮುದ್ದು ನನ್ನ ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತಿದಾಗೆ  ಉಫ್ ಎಂದು ಶ್ವಾಸ ಹೊರ ಹಾಕಿ ದ್ವಿಗುಣಗೊಂಡ ಎದೆ ಬಡಿತವನ್ನು ಹಿಡಿತಕ್ಕೆ ತಂದೆಯಾದರು ಮನದೊಳಗಿನ್ನು ಕಸಿವಿಸಿ,ಮೆದುಳಿನಲ್ಲಿ ವಿಚಿತ್ರ ಅಸ್ಪಷ್ಟತೆಯ ನೆರಳುಗಳು.ಅವುಗಳನ್ನು ಹೆಚ್ಚು ಕೆದಕುವ ಗೋಜಿಗೆ ಹೋಗಲಿಲ್ಲ.ಆ ಕ್ಷಣದ ಸಂತೋಷವನೆಲ್ಲಾ  ನನ್ನದಾಗಿಸುವ ಪ್ರಮಾಣವಿತ್ತಂತೆ ಯಾವುದೋ ಶಕ್ತಿ ಅವನ್ನು ತಡೆದು ನಿಲ್ಲಿಸಿರಬೇಕು.ಮೌನದಲ್ಲಿ ನಡೆಯುತಿರುವ ಗುದ್ದಾಟಗಳ ತಪ್ಪಿಸಿಕೊಂಡು ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಳಗೆ ನಡೆಯುವಂತ ಎಲ್ಲ ನವಿರಾದ ಚಟುವಟಿಕೆಗಳು ನನ್ನೊಳಗೂ ನಡೆಯುತ್ತಿದೆಯೆಂಬ ಉತ್ಸಾಹದಿಂದಲೇ  ಅರಿಶಿನ ಮೆತ್ತಿದ ಸೀರೆಯ ಅಂಚನ್ನು ಕೊಡಕದೆ ಆ ಸುಂದರ ಸಂಭ್ರಮದ  ನೆನಪಿನ ಬಿಲ್ಲೆಯನ್ನು ನಾಜುಕಾಗಿ  ಮಡೆಚಿ  ಕಪಾಟಿನೊಂದು  ಮೂಲೆಯಲ್ಲಿ ಎತ್ತಿರಿಸಿದೆ.

ಮರು ದಿನ ಮುದ್ದು ಗಾಗಿ ಅಮ್ಮ ಹಲವು ದಿನಗಳಿಂದ ನೆಯ್ಯುತ್ತಿದ್ದ  ಬೆಚ್ಚನೆ ಸ್ವೆಟರ್ ಸಾಕ್ಸ್ ಸಂಪೂರ್ಣ ರೂಪು ಪಡೆದು ಮುಗಿಯುವ ಹಂತ ತಲುಪಿತ್ತು.ಅವಳ  ತೊಡೆ ಮೇಲೆ ಮಲಗಿ ಅಲ್ಲಿಂದಲೇ ನೂಲಿನುಂಡೆಯ ಸ್ವೆಟರ್ ನ ಬಣ್ಣ ಅಕಾರವನೆಲ್ಲ ಅಸ್ವಾದಿಸುತ್ತ ಅದರ ಕೊನೆಯ ಅಂಚು ಇಂಚಿಂಚಾಗಿ  ಅಗಲವಾಗುತ್ತಿದ್ದದ ಆನಂದದಿಂದ ಹೃದಯ  ತುಂಬಿಕೊಳುತ್ತಿದ್ದಾಗಲೇ ನೋವು ಕಾಣಿಸಿಕೊಂಡು ತೀವ್ರವಾಯ್ತು.ನಾ ಹಾತೊರೆಯುತ್ತಿದ್ದ ಶುಭ ದಿನದ  ಕ್ಷಣ ಗಣನೆ ಪ್ರಾರಂಭವಾಗಿತ್ತು.ಆಸ್ಪತ್ರೆಯಲ್ಲಿ ಸುಲಲಿತ ಹೆರಿಗೆಯಾಗಿ  ಮುದ್ಧುವಿನ ಮುಖ ನೋಡಲು ಮತ್ತದರ  ಮೊದಲ ಸ್ಪರ್ಶಕ್ಕೆ ಕೈ ಚಾಚುತ್ತಿದ್ದಾಗೆ ಕಂಗಳು ಸೋತಂತಾದವು.
*
ಏನೋ ಅಡಚಣೆ ರೆಪ್ಪೆ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗುತ್ತಿಲ್ಲ.ಕೈಯಾಡಿಸಲು ನೋಡಿದೇ  ಸೂಜಿ ಒತ್ತಿತು.ಕೆಲ ನಿಮಿಷಗಳು ನಿಶಕ್ತತತೆ ಆವರಿಸಿಕೊಂಡಂತಾಗಿ  ಕೈ ಎತ್ತಲು ಅಸಂಭವವೆನಿಸಿತು.ಹೇಗೋ ಇದ್ದ ಸಮಗ್ರ ಬಲವನೆಲ್ಲಾ  ಹಾಕಿ ಹೊಟ್ಟೆಯ ಮೇಲೆ ಕೈಯಿಟ್ಟೆ ...ಹೊಟ್ಟೆಗೂ ಪೈಪ್ ಚುಚ್ಚಿದ್ದಾರೆ! ಇದೇನಿದು ಮುದ್ಧು ಎಲ್ಲಿ? ಹೌದು  ಮುಖ ತೋರಿಸದೆ ಕೊಂಡೊಯ್ದರಲ್ವ?ನಡೆದ್ದದ್ದೇನು ಸರಿಯಾಗಿ ನೆನಪಿನಲ್ಲಿಲ್ಲ. ಮಗುವ ನೋಡುವ ತಳಮಳದಲ್ಲಿ ಭಾರವಾದ ಕಂಗಳ ಬಲವಂತವಾಗಿ ತೆರೆಯಲು ಮುಂದಾದೆ.ಬೆಡ್ ಆಚೆ ಬದಿಯ ಕುರ್ಚಿಯಲ್ಲಿ ಕುಳಿತ ಅಮ್ಮನ ಮುಖ ನೋಡಿ ತುಸು ನೆಮ್ಮದಿಯಾಯ್ತು .ಕರೆಯೋಣವೆಂದರೆ ಬಾಯಿ ಒಣಗಿ ಮಾತ್ ಹೊರಡುತ್ತಿಲ್ಲ.ಕೋಣೆ ಪೂರ್ತಿ ದೃಷ್ಟಿ ಹಾಯಿಸಿದಾಗ ಅಪ್ಪ ಅಣ್ಣ ಅಕ್ಕ ಡಾಕ್ಟರ ಬಾಗಿಲ್ಲಲ್ಲಿ ನಿಂತಿದ್ದು  ಕಂಡಿತು.

ಕಾಡಿದ ನಿಶಕ್ತಿಯ ಸಾವರಿಸಿಕೊಂಡು "ಅಮ್ಮ ಅಮ್ಮ .....ಮುದ್ಧು..." ನನ್ನ ಮಾತನ್ನು ತಡೆಯುವಂತೆ ಕೆನ್ನೆತಟ್ಟಿ "ಮುದ್ಧು ಮುದ್ದು ಸದ್ಯ ಕಣ್ ಬಿಟ್ಯಲ್ಲ"ಎಂದು ಗೆದ್ದವಳಂತೆ ನನ್ನ ಮುದ್ದಾಡಿದಳು.ಅದ ಗಮನಿಸಿದ ಡಾಕ್ಟರ ಬಳಿ ಬಂದು ಎದೆ ಬಡಿತ  ಪರೀಕ್ಷಿಸಿ "ಇನ್ನು ತೊಂದರೆ ಇಲ್ಲ,ಗರ್ಭಕೋಶದ ಜೊತೆಗೆ  ಅಲ್ಲಿ  ಹಬ್ಬಿದ ಕ್ಯಾನ್ಸರ್  ಕಣಗಳನ್ನ ತೆಗೆದಿದ್ದೇವೆ .ಮುಂದೆ ಬೇರೆಡೆ ಹರಡುವ ಸಾಧ್ಯತೆಗಳು ತೀರ ಕಡಿಮೆ ಯಾವುದಕ್ಕೂ ರಿಪೋರ್ಟ್ಸ ಬಂದ ನಂತರ ಗೊತ್ತಾಗುತ್ತೆ.ಇನ್ನೊಂದು ತಿಂಗಳು ಹಾಸಿಗೆ ಬಿಟ್ಟು ಏಳುವಂತಿಲ್ಲ ಆಮೇಲೆ ಮಾಮೂಲಿನಂತೆ ಓಡಾಡಬಹುದು" ಅಂತೇಳಿ ಧೈರ್ಯದ ನಗು ಬೀರಿ ಹೊರ ನಡೆದರು.ಇವರೇನು ಹೇಳ್ತಿದ್ದಾರೆ? ಅದಿರಲಿ ನನ್ನ ಮುದ್ದು ಎಲ್ಲಿ? ಆದರೆ... ಮುದ್ದು.. ಮುದ್ದು...ಯಾರು??ಮದುವೆ  ಆಗದ ನನಗೆ ಮಗುನ!? ಆ ಧೂರ್ತ ನೆನಪು ಸಾಕಾಗಿತ್ತು ಮನಸು ಮುರಿದು ವಾಸ್ತವಕ್ಕೆ ಎಳೆತರಲು.

ಕಣ್ಣು ಮಂಜಾಗಿ ಚಿಮ್ಮಿದ ಹನಿಗಳನ್ನ ಅಂಗೈಯಲ್ಲಿ ಒರಿಸುತ್ತಿದ್ದಾಗ ಆವರಿಸಿದ ನಿದ್ರೆಯ ಮಂಪರ ತಡೆಯುವ  ಮನಸಾಗಲಿಲ್ಲ.ಈ ಬಾರಿ ಬೀಳೋ ಕನಸಿನ್ನಲ್ಲಾದರು ಮುದ್ದುವಿನ ಮುದ್ದು ಮುಖ ನೋಡ ಸಿಗಬಹುದೆಂಬ ಹಂಬಲದಿಂದ ಒದ್ದೆ ಕಂಗಳ ಮುಚ್ಚಿದೆ.

.......................................................ಸ್ವಪ್ನ ಭಂಗ"

Thursday, November 1, 2012

ಹೊಸ ನೀರು : ಹಳೆ ನೀರ ರಭಸಕ್ಕೆ ಮಡಿದವರೆಷ್ಟೋ , ಹೊಸ ನೀರ ಸುಳಿಗೆ ಸಿಲುಕುವವರೆಷ್ಟೋ!

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ.


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು.

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು.


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ.

ನಾನು.. ಅವಳಾಗಬೇಕು : ಬಂಧ ಮುಕ್ತಿ

"ಬಿಡು ಇಲ್ಲಿಂದ ನನ್ನ  ಹೊರ ಬಿಡೂ ...ನಿನಗೊಂದಿಷ್ಟೂ  ಕರುಣೆ ಬಾರದೆ? ಆ ಬದಿಯ ವಿಸ್ಮಯಗಳ ನೋಡಬೇಕೆನಿಸಿದೆ ...ದಮ್ಮಯ್ಯ" ಎಂದು ಎಷ್ಟು ಗೋಗರೆದರು ಅವನ ಮನಸು ಕರಗಲ್ಲಿಲ್ಲ.ಅವನಾದರೂ ಏನು ಮಾಡುವನು? ನನ್ನಷ್ಟೇ  ಅಸಹಾಯಕನಲ್ಲವೇ? ಎಂದು ಸಮಾದಾನ ತಂದು ಕೊಂಡೆ.ಆದರೆ ಆತ ಸಂಭವಿಸದವನೆ? ಅಶಕ್ತನೆ?ಅಸ್ಪೂರ್ಥಿವಂತನೆ?ಅನಿಶ್ಚಯನೆ?ಸಂಪೂರ್ಣ ಅಮೂರ್ತ ರೂಪನೆ? ನನ್ನನ್ನಿಲ್ಲಿಂದ ಪಾರುಮಾಡದಷ್ಟು ಅಸಮರ್ಥನೆ? ಸಾವಿರ ಸಾವಿರ ಪ್ರಶ್ನೆಗಳು ಅಲೆಗಳಂತೆ  ನನ್ನೊಳಗಿನ ನಿರ್ಲಿಪ್ತ ಭಾವನ ಮಂಟಪದ ಮೇಲಪ್ಪಳಿಸಿ ಕೆಣಕುತ್ತಿದ್ದವು.
       
  ಆತ  ಮೆಲ್ಲನೆ ನನ್ನೆಡೆಗೆ ಹಾದು ಬಂದ ನಾ ಹಿಂದೆ ಹಿಂದೆ ಸರಿದೆ.ಅವನು ಕರಗುವಂತ ಮುಗುಳ್ನಗೆಯೊಂದಿಗೆ ನನ್ನ ಅಶಾಂತತೆಯ ನೇವರಿಸುತ್ತಾ 'ನಿನ್ನಿಲ್ಲಿ ಬಂಧಿಯೇ?ಇಲ್ಲಿರದಂತದ್ದು  ಅಲ್ಲೇನಿದೆ?ಮತ್ತೊಮ್ಮೆ ಚಡಪಡಿಕೆಯೇ?ಆ ನರಳಿಕೆಯತ್ತ  ಆಕರ್ಷಣೆಯೇ?ನಿನಗಿಲ್ಲೇನು ಕೊರತೆ ಆಗಿದೆ ಹೇಳು?'ಎಂದು ತನ್ನ ಸಮುದ್ರದಾಳದ ಶಾಂತ ನಯನಗಳಲ್ಲಿ  ನನ್ನ ಮುಳುಗಿಸಲು ಯತ್ನಿಸಿದನು.ಯಾಕೊ ಭಯವೆನಿಸಿತು..ಇದೆ ಮೊದಲ ಬಾರಿಗೆ ಆ ಕಂಗಳತ್ತ ನೋಡಲಾಗುತ್ತಿಲ್ಲ.ಮನಸೆಳೆಯುತಿದೆಯಾದರು ಆ ಅದೃಶ್ಯ ಕನಸುಗಳೆಲ್ಲಾ ಒಟ್ಟಾಗಿ ಮುಗಿ ಬಿದ್ದು ನನ್ನ ಚಂಚಲ ಚಿತ್ತ ಅವುಗಳೊಂದಿಗೆ ಮಿಲನಿಸದಂತೆ ತಡೆಯುತ್ತಿವೆ.

ಅವನೆದುರು ಒಂದು ಕ್ಷಣ ಇರಬೇಕೆನಿಸಲಿಲ್ಲ.ನೂರಾರು ಗೊಂದಲಗಳು ನನ್ನ ಭಾರವಾಗಿಸಿವೆ.ಇನ್ನಿಲ್ಲಿರಲಾಗದು.ಆದರೆ.. ಆದರೆ ಅವನಪ್ಪಣೆ  ಇಲ್ಲದೆ ಹೋಗೋದಾದ್ರೂ ಎಲ್ಲಿಗೆ? ಯಾವ ಪುರುಷಾರ್ತಕ್ಕಾಗಿ?ಅವನು ನುಡಿದ ಹಾಗೆ ನನ್ನಗಿಲ್ಲೇನಾದರು ಕೊರತೆಯೇ? ಒಮ್ಮೆ ಸುತ್ತಲೂ ನಿಂತಲ್ಲೇ ತಿರುಗಿದೆ. ತೋಚಿದ  ದಾರಿಯಲ್ಲೆಲ್ಲಾ ಅಲೆದಾಡಿದೆ ಇಲ್ಲ  ಗುಲಗಂಜಿಯಷ್ಟು ಕೊರತೆಯ ಭಾವ ಕಾಡಲಿಲ್ಲ ನಿಜಕ್ಕೂ ನನಗೇನು ಕಡಿಮೆ ಆಗಿದೆ?ಹಾಗಿದ್ದರೆ ಪದೇ  ಪದೇ  ನನ್ನ ಸೆಳೆಯುತ್ತಿರುವ ಕನಸುಗಳೆಲ್ಲಾ ಬ್ರಹ್ಮೆಯಾಟವೆ?? ಇಲ್ಲವೋ ಯಾರದ್ದಾದರು  ಪಿತೂರಿಯೇ?ಅದೇಕೆ ನನ್ನನೀಗೆ ಕಾಡುತಿಹುದು?ಯಾವುದಕ್ಕೆ ಈ ಪರಿತಪನೆ?

 ಚಿತ್ರಕೃಪೆ:ಮದನ್ ಕುಮಾರ್
     ದೂರದಲ್ಲೊಂದು ಹೂವಿನ ಹಾಸಿಗೆ ಮೇಲೆ ಪರಿಮಳದ ಮಲ್ಲಿಗೆಯ ಪಕಳೆಗಳು ಬಿಡಿ ಬಿಡಿಯಾಗಿ ಚಿದರಿ ಧನ್ಯವಾಗಿತ್ತು.ನನ್ನ ಕನಸು ಮತ್ತೆ ಮೊಳಕೆಯೊಡೆಯಿತು.ಈ ಸಲ ಹಟವಿಡಿದಾದರು ಆತನ ಒಪ್ಪಿಸಲೇ ಬೇಕೆಂದು ಸಂಕಲ್ಪಿಸಿದೆ.ಅಷ್ಟರಲ್ಲೇ ಅಲ್ಲೇನೋ ಪಿಸುಮಾತು,ಉನ್ಮಾದದ  ಉದ್ದಿಪನ ಇಳಿದಂತೆ  ಉಸಿರುಗಟ್ಟಿದ  ನಡುಕಿನ ಶಬ್ದ.ಆ ಬಾಗಿಲಿಗೆ ಕಿವಿಯಾದೆ 'ಬರೀ  ಗಂಡ? 'ಹೌದು ಗಂಡಾದರೆ ಮಾತ್ರ ಗೊತ್ತಾಯಿತ?'.ಎಲ್ಲೋ ಏನೋ ಒಡೆದಂತಾಯಿತು...ಅಯ್ಯೋ ಅವೇ ಅವೇ ನನ್ನ ಹುರಿದೆಬ್ಬಿಸಿದ ಆ ಕನಸುಗಳು  ಮತ್ತೆ ಚುರಾದವು.ಇನ್ನೊಮ್ಮೆ ನಾ ಈ ಪಾಪದ ಲೋಕದ ಸಂಚಿಗೆ ಬಲಿಯಾಗಲು ಸಿದ್ದವಿಲ್ಲ.ಅದಕ್ಕೆ ಇನ್ನು ಈ ಕೆಟ್ಟ ಆಸೆಗಳೇ  ಮರಳ ಕೂಡದು.ಅವನ್ನೆಲ್ಲ  ಆರಿಸಿ ಸೇರಿಸಿ ಬಂಧಿಸಿ ಕಾಣದ ಕಾಡಿನ ಹಂದರದಲ್ಲಿ ದಫಾನ್ ಮಾಡಿಬಿಟ್ಟೆ.

ಅದೆಷ್ಟು  ದಿನಗಳಲೆದೆನೋ ..ಯಾಕೊ ನಿರಾಳವೆನಿಸಲ್ಲಿಲ್ಲ. ಆಳಕ್ಕಿಳಿದು ತೇಜಸ್ಸಿಲ್ಲದ ವ್ಯರ್ಥ ಕನಸಿನ ಪಳೆಯುಳಿಕೆಗಳನ್ನ ಹೊರ ತೆಗೆದೇ.ನನ್ನ ಹಿಂದಿನ ಹತ್ಯೆಯ ಕಥೆಯನ್ನ ಅವುಗಳ ಸಮಕ್ಷಮ ಮೌನ ರಾಗದಲ್ಲಿ ಹಾಡಿದೆ. ನನ್ನ 'ಅವಳಾಗೋ'   ಮೋಹ ರೂಪಿ ಕನಸುಗಳೆಲ್ಲಾ ಕರಗಿದವು ...ಕನಸಿನೊಂದಿಗೆ ಅಶಾಂತತೆಯು ಕರಗಿತು...ನನ್ನ ಭಾರವು ಕರಗಿತು...ಅತೃಪ್ತಿಯೂ  ಕರಗಿತು..ಎಲ್ಲವೂ  ಕರಗಿ ಕರಗಿ..ಕರಗುತ್ತಿದ್ದಂತೆ  ದಿವ್ಯಾ ಕಿರಣಗಳು ನನ್ನನ್ನಾವರಿಸಿದವು. ಹೌದು ನನ್ನವನೇ ಮೇಲು.ಅವನೇ ನನಗಾಸರೆ ನನಗವನೂರೆ ಎಲ್ಲಾ ಎಂದು ಬಂಧ ಮುಕ್ತವಾಗಿ ಹಗುರಾಗಿ ಅವನೆಡೆಗೆ ತೇಲಿದೆ.